ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆಯ ಸದಸ್ಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕುಪ್ವಾರ ಜಿಲ್ಲೆಯ ನಿವಾಸಿ ರಿಯಾಜ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ನಿವೃತ್ತ ಸೇನಾ ಸಿಬ್ಬಂದಿಯೂ ಆಗಿರುವ ಆರೋಪಿಯನ್ನು ಪೊಲೀಸರು ಭಾನುವಾರ ದೆಹಲಿ ರೈಲು ನಿಲ್ದಾಣದಲ್ಲಿ ಬಂಧಿಸಿದರು. ಆತನ ಬಳಿಯಿದ್ದ ಒಂದು ಮೊಬೈಲ್ ಮತ್ತು ಒಂದು ಸಿಮ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಆರೋಪಿಯು ಗಡಿ ನಿಯಂತ್ರಣ ರೇಖೆಯಿಂದ (ಎಲ್ಒಸಿ) ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕ ಕೃತ್ಯಗಳನ್ನು ನಿರ್ವಹಿಸುವವರಿಂದ ಎಲ್ಒಸಿಯಾದ್ಯಂತ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆಯುವಲ್ಲಿ ಆರೋಪಿಯು ಖುರ್ಷಿದ್ ಅಹ್ಮದ್ ರಾಥರ್ ಮತ್ತು ಗುಲಾಮ್ ಸರ್ವರ್ ರಾಥರ್ ಎಂಬುವವರ ಜತೆ ಸಂಚು ರೂಪಿಸುತ್ತಿದ್ದ. ಖುರ್ಷಿದ್ ಮತ್ತು ಗುಲಾಮ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಯೋತ್ಪಾದಕರ ತಾಣದ ಮೇಲೆ ದಾಳಿ ನಡೆಸಿದ್ದ ತನಿಖಾ ಸಂಸ್ಥೆಗಳು ಐವರನ್ನು ಬಂಧಿಸಿತ್ತು. ಅಲ್ಲಿ ಎಕೆ ರೈಫಲ್ಗಳು ಸೇರಿದಂತೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಆರೋಪಿ ರಿಯಾಜ್ ತಪ್ಪಿಸಿಕೊಂಡು ದೆಹಲಿಗೆ ಬಂದಿರುವುದಾಗಿ ತನಿಖಾ ಸಂಸ್ಥೆಗಳಿಂದ ಭಾನುವಾರ ಮಾಹಿತಿ ಬಂದ ಕೂಡಲೇ, ಆತನನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.