ಕೋಲ್ಕತ್ತ: ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸುವತ್ತ ದಾಪುಗಾಲಿಟ್ಟಿದೆ. ಆ ಮೂಲಕ ತನ್ನ ಈ ಹಿಂದಿನ ಸಂಖ್ಯಾಬಲವನ್ನು ವೃದ್ಧಿಸಿಕೊಳ್ಳುವ ಸೂಚನೆ ನೀಡಿದೆ.
42 ಲೋಕಸಭಾ ಕ್ಷೇತ್ರಗಳ ಪೈಕಿ 29ರಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೇವಲ 12 ಸೀಟುಗಳಲ್ಲಿ ಮುಂದಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. 18 ಸೀಟುಗಳು ಬಿಜೆಪಿ ಪಾಲಾಗಿದ್ದವು. ಈ ಬಾರಿ ಬಿಜೆಪಿ ನಾಯಕರ ಅಬ್ಬರದ ಪ್ರಚಾರದ ಹೊರತಾಗಿಯೂ ಬಿಜೆಪಿ ಕಳಪೆ ಪ್ರದರ್ಶನ ತೋರಿದೆ.
2019ರ ಚುನವಣೆಯ ಹಾಗೆ ಈ ಚುನಾವಣೆಯಲ್ಲೂ ಎಡಪಕ್ಷಗಳು ಖಾತೆ ತೆರೆಯುವಲ್ಲಿ ವಿಫಲವಾಗಿವೆ. ಮಾಲ್ಡಾ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವಿನ ಹಾದಿಯಲ್ಲಿದೆ. ಬರರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಆಧೀರ್ ರಂಜನ್ ಚೌಧರಿ ಟಿಎಂಸಿಯ ಯೂಸುಫ್ ಪಠಾಣ್ ಅವರ ವಿರುದ್ಧ 85 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಿಂದೆ ಇದ್ದಾರೆ.
ಟಿಎಂಸಿ ನಾಯಕ, ಹಾಲಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಅಭಿಜಿತ್ ದಾಸ್ ಅವರಿಗಿಂತ 707,360 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.