ನವದೆಹಲಿ: ಲೋಕಸಭಾ ಚುನಾವಣೆಯು ಭಾರತದ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ‘ಭಯೋತ್ಪಾದನೆಯ ಅತಿ ದೊಡ್ಡ ಪ್ರಾಯೋಜಕರ’ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
‘ಭಾರತದ ಚುನಾವಣೆಯಲ್ಲಿ ದ್ವೇಷ ಮತ್ತು ಭಯೋತ್ಪಾದನೆಯ ಶಕ್ತಿಗಳನ್ನು ಸೋಲಿಸಿ’ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ಅವರಿಗೆ ಕೇಜ್ರಿವಾಲ್ ತಿರುಗೇಟು ನೀಡಿದರು.
ದೆಹಲಿಯಲ್ಲಿ ಮತದಾನ ಮಾಡಿದ ನಂತರ ಅವರು ಅದರ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ‘ಸರ್ವಾಧಿಕಾರ, ಹಣದುಬ್ಬರ, ನಿರುದ್ಯೋಗ’ದ ವಿರುದ್ಧ ಮತ ಚಲಾವಣೆ ಮಾಡಿದ್ದಾಗಿ ಉಲ್ಲೇಖಿಸಿದ್ದರು.
ಅದನ್ನು ಹಂಚಿಕೊಂಡಿದ್ದ ಫವಾದ್ ಹುಸೇನ್, ‘ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಭಯೋತ್ಪಾದನೆಯ ಶಕ್ತಿಗಳನ್ನು ಸೋಲಿಸಲಿ’ ಎಂದು ಹಾರೈಸಿದ್ದರು.
ಹುಸೇನ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ಚೌಧರಿ ಸಾಬ್, ನಾನು ಮತ್ತು ನನ್ನ ದೇಶದ ಜನ ನಮ್ಮ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇವೆ. ನಿಮ್ಮ ಹೇಳಿಕೆ ಅನಗತ್ಯ. ಪಾಕಿಸ್ತಾನದ ಸದ್ಯದ ಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ನಿಮ್ಮ ದೇಶದ ಬಗ್ಗೆ ಗಮನ ಹರಿಸಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅದಕ್ಕೆ ಫವಾದ್ ಹುಸೇನ್ ಮತ್ತೆ ಪ್ರತಿಕ್ರಿಯಿಸಿದ್ದು, ‘ಮುಖ್ಯಮಂತ್ರಿ ಸಾಬ್, ಚುನಾವಣೆ ಎನ್ನುವುದು ನಿಮ್ಮ ವಿಚಾರವೇ ಸರಿ. ಆದರೆ, ಭಯೋತ್ಪಾದನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲೇ ಇರಲಿ, ಅದು ಅಪಾಯಕಾರಿಯೇ. ಆತ್ಮಸಾಕ್ಷಿ ಇರುವ ಪ್ರತಿಯೊಬ್ಬರೂ ಅದರ ಬಗ್ಗೆ ಗಮನ ಹರಿಸಬೇಕು’ ಎಂದಿದ್ದಾರೆ.
ಕೇಜ್ರಿವಾಲ್ ಹಾಗೂ ಹುಸೇನ್ ನಡುವಿನ ಸಂವಾದವನ್ನು ಬಿಜೆಪಿ ಟೀಕಿಸಿದೆ.
‘ಕೇಜ್ರಿವಾಲ್ ಅವರು ದೇಶದ ಶತ್ರುಗಳೊಂದಿಗೆ ಸ್ನೇಹ ಸಂಬಂಧ ಹೊಂದಿದ್ದಾರೆ’ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.