ADVERTISEMENT

2024ರ ಲೋಕಸಭೆ ಚುನಾವಣೆಯು ಧರ್ಮ, ಜಾತಿ ಆಧಾರದಲ್ಲಿ ಧ್ರುವೀಕರಣಗೊಂಡಿದೆ: ತಜ್ಞರು

ಪಿಟಿಐ
Published 3 ಜೂನ್ 2024, 11:09 IST
Last Updated 3 ಜೂನ್ 2024, 11:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಈ ಲೋಕಸಭಾ ಚುನಾವಣೆಯು ಜಾತಿ, ಧರ್ಮದ ಆಧಾರದಲ್ಲಿ ಭಾರಿ ಪ್ರಮಾಣದಲ್ಲಿ ಧ್ರುವೀಕರಣಗೊಂಡ ಚುನಾವಣೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯು ವಿವಿಧ ಹಿಂದುಳಿದ ವರ್ಗದ ಜಾತಿಗಳನ್ನು ಹಿಂದುತ್ವ ಕಾರ್ಡ್‌ ಮೂಲಕ ಒಗ್ಗೂಡಿಸುವ ಪ್ರಯತ್ನ ಮಾಡಿದರೆ, ಇಂಡಿಯಾ ಮೈತ್ರಿಕೂಟವು ಜಾತಿ ಗಣತಿ ಮಾಡುವುದಾಗಿ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಓಲೈಕೆ ಮಾಡುವ ಪ್ರಯತ್ನ ಮಾಡಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ನಾನು ನೋಡಿದ ಚುನಾವಣೆಗಳಲ್ಲಿ ಇದು ಭಾರಿ ಧ್ರುವೀಕರಣಗೊಂಡ ಚುನಾವಣೆ ಎಂದು ಅಸೋಶಿಯೇಶನ್ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ನ (ಎಡಿಆರ್‌) ಸಹ ಸಂಸ್ಥಾಪಕ ಜಗದೀಪ್ ಚೊಕರ್ ಹೇಳಿದ್ದಾರೆ.

‘ಜಾತಿ, ಧರ್ಮ, ಪ್ರಾದೇಶಿಕತೆಯ ಆಧಾರದಲ್ಲಿ ಧ್ರುವೀಕರಣ ನಡೆದಿದೆ. ಇದು ಈ ಹಿಂದಿನ ಚುನಾವಣೆಗಳಂತಲ್ಲ. ಜಾತಿ ಎನ್ನುವುದು ‍ಪ್ರತಿ ಚುನಾವಣೆಯಲ್ಲಿ ಜನರನ್ನು ಒಂದುಗೂಡಿಸುವ ವಿಷಯವಾಗಿತ್ತು. ಆದರೆ ಈ ಚುನಾವಣೆಯಲ್ಲಿ ಜಾತಿ ಹಾಗೂ ಧರ್ಮಾಧಾರಿತ ವಿಷಯಗಳು ಚಾಲ್ತಿಯಲ್ಲಿದ್ದವು’ ಎಂದು ಅವರು ಹೇಳಿದ್ದಾರೆ.

‘ಇಂಡಿಯಾ ಒಕ್ಕೂಟವು ಪ್ರಸ್ತಾಪಿಸಿದ ಆಹಾರ, ನಿರುದ್ಯೋಗ, ಹಣದುಬ್ಬರ ಹಾಗೂ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡುವ ಭರವಸೆಯು ಬಿಜೆಪಿಯ ಒಬಿಸಿ ಮತಬ್ಯಾಂಕ್‌ಗೆ ಪರಿಣಾಮ ಬೀರಿದೆ. ಹಿಂದುತ್ವದಡಿ ಹಿಂದುಳಿದ ವರ್ಗಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ’ ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಇಫ್ತಿಕಾರ್ ಅಹ್ಮದ್ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

‌ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ‘ಪಿಡಿಎ’ (ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ) ಒಗ್ಗೂಡಿಸುವ ಹಾಗೂ, ಬಿಹಾರದಲ್ಲಿ ಮುಸ್ಲಿಂ, ಯಾದವ, ಬಹುಜನ, ಅಗ್ರ, ಆದಿ ಆಬಾದಿ ಹಾಗೂ ಬಡವರನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಲಾಯಿತು. ಮಹಾರಾಷ್ಟ್ರದಲ್ಲಿ ಮರಾಠರು ಹಾಗೂ ಮುಸಲ್ಮಾನರು ಉದ್ಧವ್ ಠಾಕ್ರೆ ಬಣದ ಶಿವಸೇನಾದ ಬೆನ್ನಿಗೆ ನಿಂತರು ಎಂದು ಅನ್ಸಾರಿ ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.