ಮುಂಬೈ: ಮುಂಬರುವ ವಿಧಾನಸಭೆ ಚುನಾವಣೆಗೆ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಭರ್ಜರಿ ತಯಾರಿ ನಡೆಸಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲು ಬರೋಬ್ಬರಿ 50 ಸಾವಿರು ಯುವಕರನ್ನು ಅರೆಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸಿದ್ದತೆ ಆರಂಭಿಸಿದೆ.
ಇವರಿಗೆ ‘ಯೋಜನಾ ದೂತರು’ ಎಂದು ಹೆಸರಿಡಲಾಗಿದೆ. ಸಚಿವ ಚಂದ್ರಕಾಂತ್ ಪಾಟೀಲ ಅವರು ಮಂಗಳವಾರ ವಿಧಾನ ಪರಿಷತ್ನಲ್ಲಿ ಈ ವಿಷಯ ತಿಳಿಸಿದ್ದಾರೆ.
ಯೋಜನಾ ದೂತರಿಗೆ ಕೆಲಕಾಲ ತರಬೇತಿ ನೀಡಿ ಕೇಂದ್ರ, ರಾಜ್ಯದ ಸಮಗ್ರ ಕಾರ್ಯಕ್ರಮಗಳ ಬಗ್ಗೆ ಹಾಗೂ ಅದರ ಫಲಾನುಭವಿಗಳ ಬಗ್ಗೆ ರಾಜ್ಯವ್ಯಾಪಿ ಪ್ರಚಾರ ಮಾಡಿಸಲು ಬಳಸಿಕೊಳ್ಳಲಾಗುತ್ತದೆ.
ಆದರೆ, ಪಾಟೀಲ ಅವರ ಈ ಪ್ರಸ್ತಾವನೆ ವಿವಾದ ಸ್ವರೂಪ ಪಡೆದಿದ್ದು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸರ್ಕಾರಿ ದುಡ್ಡಿನಲ್ಲಿ ಯುವಕರನ್ನು ಬಳಸಿಕೊಂಡು ಚುನಾವಣೆಗೋಸ್ಕರ ರಾಜಕೀಯ ಗಿಮಿಕ್ ಮಾಡುತ್ತಿದೆ ಎಂದು ಹರಿಹಾಯ್ದಿವೆ.
ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವ ಸಂಭವ ಇದೆ. ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಶಿಂದೆ ಬಣ–ಎನ್ಸಿಪಿ ಅಜಿತ್ ಪವಾರ್ ಬಣದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.