ADVERTISEMENT

Maharashtra Polls | 8-10 ದಿನದಲ್ಲಿ ‘ಮಹಾಯುತಿ’ ಸೀಟು ಹಂಚಿಕೆ ಅಂತಿಮ: ಶಿಂದೆ

ಪಿಟಿಐ
Published 15 ಸೆಪ್ಟೆಂಬರ್ 2024, 12:32 IST
Last Updated 15 ಸೆಪ್ಟೆಂಬರ್ 2024, 12:32 IST
<div class="paragraphs"><p>ಏಕನಾಥ ಶಿಂದೆ, ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್</p></div>

ಏಕನಾಥ ಶಿಂದೆ, ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್

   

-ಪಿಟಿಐ ಚಿತ್ರ

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ‘ಮಹಾಯುತಿ’ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿದೆ.

ADVERTISEMENT

‘ಮುಂದಿನ 8ರಿಂದ 10 ದಿನದ ಒಳಗಾಗಿ, ‘ಗೌರವಯುತ’ ಹಾಗೂ ‘ಸೇರ್ಪಡೆ ಪೂರಕ ಸೂತ್ರ’ವು ಅಂತಿಮಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ತಿಳಿಸಿದರು.

ನಗರದ ಮಲಬಾರ್‌ ಹಿಲ್‌ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಭಾನುವಾರ ಆಯೋಜಿಸಿದ್ದ ‘ಗಣೇಶೋತ್ಸವ’ ಸಮಾರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಔಪಾಚಾರಿಕವಾಗಿ ಮಾತುಕತೆ ವೇಳೆ ಈ ವಿಷಯ ತಿಳಿಸಿದರು.

‘ಸೀಟು ಹಂಚಿಕೆ ಮಾತುಕತೆಯು ಚರ್ಚೆಯ ಹಂತದಲ್ಲಿದೆ. ಆದಷ್ಟು ಬೇಗ ಒಪ್ಪಂದ ಅಂತಿಮಗೊಳ್ಳಲಿದ್ದು, ಎಲ್ಲರಿಗೂ ತಿಳಿಯಲಿದೆ’ ಎಂದರು.

‘ಮಹಾಯುತಿ’ (ಎನ್‌ಡಿಎ) ಮೈತ್ರಿಕೂಟದಲ್ಲಿರುವ ಬಿಜೆಪಿ, ಶಿವಸೇನಾ, ಎನ್‌ಸಿಪಿ ಮುಖಂಡರು ಸೀಟು ಹಂಚಿಕೆ ಕುರಿತಂತೆ ನಿರಂತರ ಮಾತುಕತೆಯಲ್ಲಿ ತೊಡಗಿದ್ದಾರೆ. ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ, ಬಿಜೆಪಿಯ ಮುಖ್ಯ ಕಾರ್ಯತಂತ್ರಜ್ಞ ಅಮಿತ್‌ ಶಾ, ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಮುಂಬೈಗೆ ತೆರಳಿ ಮಾತುಕತೆ ನಡೆಸಿದ್ದರು.

ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ ಮಧ್ಯಭಾಗದಲ್ಲಿ ಚುನಾವಣೆ ನಡೆಯಲಿದೆ.

ಸೀಟು ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಶಿಂದೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್‌, ಅಜಿತ್‌ ಪವಾರ್‌ ಜತೆ ಅಮಿತ್‌ ಶಾ ಅವರು ಈ ವಾರದಲ್ಲಿ ಇನ್ನೊಂದು ಸುತ್ತಿನ ಮಾತುಕತೆ ನಡೆಸುವ ನಿರೀಕ್ಷೆಯಿದೆ. 

‘ಮಹಾಯುತಿ’ ಮೈತ್ರಿ ಒಕ್ಕೂಟದಲ್ಲಿ ಬಿರುಕು?

ಮಹಾರಾಷ್ಟ್ರ ಆಡಳಿತಾರೂಢ ‘ಮಹಾಯುತಿ’ ಮೈತ್ರಿ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಲಡ್ಕಿ ಬಹೀನ್‌ ಯೋಜನೆ’ಯ ಪ್ರಚಾರದ ಕರಪತ್ರ ಹಾಗೂ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಹೆಸರು ಕೈ ಬಿಟ್ಟಿರುವುದಕ್ಕೆ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ವಿರುದ್ಧ ಶಿವಸೇನಾ ಮುಖಂಡ ಹಾಗೂ ಅಬಕಾರಿ ಸಚಿವ ಶಂಭುರಾಜ್‌ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಇದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಪವಾರ್‌ ಅವರು ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕು’ ಎಂದು ಒತ್ತಾಯಿಸಿದ್ದರು.

ಹಣಕಾಸು ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಕಳೆದೊಂದು ತಿಂಗಳಿನಿಂದ ರಾಜ್ಯದಾದ್ಯಂತ ‘ಜನ್‌ ಸಮ್ಮಾನ್‌ ಯಾತ್ರೆ’ ಹಮ್ಮಿಕೊಂಡಿದ್ದಾರೆ. ಇದು ಮೈತ್ರಿಕೂಟದಲ್ಲಿ ಬಿರುಕಿಗೆ ಕಾರಣವಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.