ಠಾಣೆ: ಸಮರ್ಪಕ ದಾಖಲೆಗಳಿಲ್ಲದೇ ದೇಶದಲ್ಲಿ ನೆಲೆಸಿರುವ ಆರೋಪದ ಮೇಲೆ ಐವರು ಬಾಂಗ್ಲಾದೇಶಿಯರನ್ನು ನವಿ ಮುಂಬೈನಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶುಕ್ರವಾರ ತ್ವರಿತವಾಗಿ ಕಾರ್ಯಾಚರಣೆಗೆ ಚಾಲನೆ ನೀಡಿದ ಎಟಿಎಸ್, ಘಾನ್ಸೋಲಿ ಪ್ರದೇಶದ ಎರಡು ಸ್ಥಳಗಳಲ್ಲಿ ಶೋಧ ಕೈಗೊಂಡಿತ್ತು. ಶಿವಾಜಿ ತಲಾವೊ ಬಳಿಯ ಜನೈ ಕಾಂಪೌಂಡ್ನಲ್ಲಿ ಐವರು ಬಾಂಗ್ಲಾದೇಶಿಯರನ್ನು ಬಂಧಿಸಲಾಯಿತು.
ಆರೋಪಿಗಳಾದ ಅಹಾತ್ ಜಮಾಲ್ ಶೇಕ್ (22), ರೆಬುಲ್ ಸಮಾದ್ ಶೇಖ್ (40), ರೋನಿ ಸೋರಿಫುಲ್ ಖಾನ್ (24), ಜುಲು ಬಿಲ್ಲಾಲ್ ಶರೀಫ್ (28) ಮೊಹಮ್ಮದ್ ಮುನೀರ್ ಮೊಹಮ್ಮದ್ ಸಿರಾಜ್ ಮುಲ್ಲಾ (49) ಅವರು ಬಂಧಿತರು. ಇವರೆಲ್ಲರೂ ಬಾಂಗ್ಲಾದೇಶದ ಎರಡು ಜಿಲ್ಲೆಗಳಿಗೆ ಸೇರಿದವರಾಗಿದ್ದು, ನವಿ ಮುಂಬೈನಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಅಕ್ರಮವಾಗಿ ನೆಲೆಸಿರುವವರ ಕುರಿತು ದೂರು ದಾಖಲಿಸಿದ್ದರು. ವಿದೇಶಿ ಪ್ರಜೆಗಳ ಕಾಯ್ದೆ– 1946 ಮತ್ತು ಪಾಸ್ಪೋರ್ಟ್ (ಭಾರತಕ್ಕೆ ಪ್ರವೇಶ) ನೀತಿ– 1950 ಅಡಿ ಬಾಂಗ್ಲಾದೇಶಿಯರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.