ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಗುರುವಾರ ವಿಧಾನ ಭವನದ ಲಿಫ್ಟ್ನಲ್ಲಿ ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವಾದ ಗುರುವಾರ ಫಡಣವೀಸ್ ಮತ್ತು ಠಾಕ್ರೆ ಲಿಫ್ಟ್ನಲ್ಲಿ ಜತೆಯಾಗಿ ತೆರಳಿದರು. ಈ ವೇಳೆ ಇಬ್ಬರು ಪರಸ್ಪರ ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಠಾಕ್ರೆ ಅವರು, ‘ಎಷ್ಟೇ ನಿರಾಕರಿಸಿದರೂ ಪ್ರೀತಿ ಮಾಡುತ್ತೇನೆ’ ಎಂಬ ಹಾಡು ಜನರಿಗೆ ಗೊತ್ತಿರುತ್ತದೆ. ಆದರೆ ನಮ್ಮಲ್ಲಿ ಆ ರೀತಿ ಏನೂ ನಡೆದಿಲ್ಲ. ಲಿಫ್ಟ್ಗಳಿಗೆ ಕಿವಿಯಿಲ್ಲ, ಹಾಗಾಗಿ ಹೆಚ್ಚಿನ ಮಾತುಕತೆಗಳನ್ನು ಲಿಫ್ಟ್ನಲ್ಲಿ ನಡೆಸುವುದು ಒಳಿತು ಎಂದು ಹೇಳಿದರು.
‘ಲಿಫ್ಟ್ ಬಾಗಿಲು ತೆರೆದ ಬಳಿಕ ಫಡಣವೀಸ್ ಸರ್ಕಾರದ ಕಚೇರಿ ಕಡೆ ತೆರಳಿದರು. ಉದ್ಧವ್ ಅವರು ವಿರೋಧ ಪಕ್ಷದ ಕಚೇರಿಗೆ ತೆರಳಿದರು. ಅವರು ಆಡಳಿತ ಪಕ್ಷದೊಂದಿಗೆ ಸೇರುವ ಉದ್ದೇಶವನ್ನು ಹೊಂದಿಲ್ಲ ಎನ್ನುವುದು ಇದರ ಅರ್ಥ’ ಎಂದು ಉದ್ಧವ್ –ಫಡಣವೀಸ್ ಜತೆ ಲಿಫ್ಟ್ನಲ್ಲಿದ್ದ ಬಿಜೆಪಿ ಶಾಸಕ ಪ್ರವೀಣ್ ದರೇಕರ್ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಅವರ ಕಚೇರಿಯಲ್ಲಿ, ಬಿಜೆಪಿಯ ಹಿರಿಯ ನಾಯಕ, ಸಚಿವ ಚಂದ್ರಕಾಂತ್ ಪಾಟೀಲ್ ಅವರು ಗುರುವಾರ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಹೂಗುಚ್ಛ ಮತ್ತು ಚಾಕೊಲೇಟ್ ನೀಡಿದರು. ಈ ವೇಳೆ ಉದ್ಧವ್ ಅವರು, ‘ನಾಳೆ ನೀವು ಜನರಿಗೆ ಮತ್ತೊಂದು ಚಾಕೊಲೇಟ್ ನೀಡಲಿದ್ದೀರಿ’ ಎಂದು ಪರೋಕ್ಷವಾಗಿ ಟೀಕಿಸಿದರು.
ಶುಕ್ರವಾರ ಮಹಾರಾಷ್ಟ್ರ ಸರ್ಕಾರ ಬಜೆಟ್ ಮಂಡಿಸಲಿರುವ ಹಿನ್ನೆಲೆ ಉದ್ಧವ್ ಅವರು ಆಡಳಿತ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.