ADVERTISEMENT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಮುಂದುವರೆದ ಸೀಟು ಹಂಚಿಕೆಯ ಕಗ್ಗಂಟು

ಪಿಟಿಐ
Published 26 ಅಕ್ಟೋಬರ್ 2024, 14:29 IST
Last Updated 26 ಅಕ್ಟೋಬರ್ 2024, 14:29 IST
<div class="paragraphs"><p>ಮುಂಬೈನಲ್ಲಿ ಶುಕ್ರವಾರ ನಡೆದ ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಕಾಂಗ್ರೆಸ್‌ ನಾಯಕ ಬಾಳಾಸಾಹೇಬ್‌ ಥೋರಟ್‌ ಇದ್ದರು</p></div>

ಮುಂಬೈನಲ್ಲಿ ಶುಕ್ರವಾರ ನಡೆದ ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಕಾಂಗ್ರೆಸ್‌ ನಾಯಕ ಬಾಳಾಸಾಹೇಬ್‌ ಥೋರಟ್‌ ಇದ್ದರು

   

ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅ. 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆದರೆ ಮಹಾ ವಿಕಾಸ ಅಘಾಡಿ (ಎಂವಿಎ) ಮಿತ್ರ ಪಕ್ಷಗಳಾದ ಶಿವಸೇನಾ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಹಾಗೂ ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಅಂತಿಮಗೊಳ್ಳದೆ ಕಗ್ಗಂಟಾಗಿದೆ. ಬಿಜೆಪಿ ನೇತೃತ್ವದ ಮಹಾಯುತಿಯಲ್ಲೂ ಸೀಟು ಹಂಚಿಕೆ ಅಂತಿಮಗೊಂಡಿಲ್ಲ.

ADVERTISEMENT

ಸೀಟು ಹಂಚಿಕೆಯಲ್ಲಿನ ಹಲವು ಸೂತ್ರಗಳಿಂದ ಗೊಂದಲ ಹೆಚ್ಚಾಗಿದೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಆದರೆ ಎಂವಿಎನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗನ್ನು ಬಿಜೆಪಿ ಸೂಕ್ಷ್ಮವಾಗಿ ನೋಡುತ್ತಿದೆ ಎಂದು ಪಕ್ಷಗಳ ಮೂಲಗಳು ತಿಳಿಸಿವೆ.

288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಗೆ ನ. 20ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿಯು ಕಳೆದ ವಾರ 85 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿತ್ತು. ಕಾಂಗ್ರೆಸ್‌ನ ಬಾಳಾಸಾಹೇಬ್‌ ಥೋರಟ್‌ ಅವರು 90–90–90 ಸೀಟು ಹಂಚಿಕೆ ಸೂತ್ರ ಮುಂದಿಟ್ಟಿದ್ದರು. ಶಿವಸೇನಾ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ ಅವರನ್ನು ಥೋರಟ್ ಅವರು ಶನಿವಾರ ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ.

‘ಕಾಂಗ್ರೆಸ್‌ ಕೂಡಾ ಎಂವಿಎ ಸದಸ್ಯ ಪಕ್ಷವಾಗಿದೆ. ವಿರೋಧ ಪಕ್ಷಗಳ ಒಕ್ಕೂಟವು ಒಟ್ಟು 180 ಸೀಟುಗಳನ್ನು ಗೆಲ್ಲಲಿದೆ. ಸರ್ಕಾರ ರಚಿಸಲಿದೆ. ಈ ಸೂತ್ರದ ಜತೆಗೆ 18 ಸೀಟುಗಳನ್ನು ಮಿತ್ರ ಪಕ್ಷಗಳಿಗೆ ಮೀಸಲಿಡಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಮುಂಬೈ ನಗರದ ಕೆಲ ಸೀಟುಗಳ ಹಂಚಿಕೆ ಕಗ್ಗಂಟಾಗಿದೆ’ ಎಂದು ಥೋರಟ್ ತಿಳಿಸಿದ್ದಾರೆ.

‘ಎಲ್ಲರೊಂದಿಗೂ ಎಲ್ಲರ ಜೊತೆಗೂ’ ಎಂದು ಹೇಳುವ ಮೂಲಕ ಶಿವಸೇನಾ (ಯುಬಿಟಿ) ಮುಖಂಡ ಸಂಜಯ ರಾವುತ್ ಅವರು ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಒಗ್ಗಟ್ಟು ಇರುವುದರ ಕುರಿತು ಹೇಳಿದ್ದಾರೆ.

‘ಹರಿಯಾಣದಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ, ಸರ್ಕಾರ ರಚಿಸುವಷ್ಟು ಬಹುಮತ ಪಡೆಯಲಾಗಲಿಲ್ಲ. ಹೀಗಾಗಿ ಅವರು ಎಲ್ಲರನ್ನೂ ಒಗ್ಗೂಡಿ ಕರೆದುಕೊಂಡು ಹೋಗಬೇಕು’ ಎಂದು ರಾವುತ್ ಹೇಳಿದ್ದಾರೆ.

ಆದರೆ ಪಿಡಬ್ಲೂಪಿ ಮತ್ತು ಸಮಾಜವಾದಿ ಪಕ್ಷಗಳು ಏಕಪಕ್ಷೀಯವಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ ಸಣ್ಣ ಪಕ್ಷಗಳನ್ನೂ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಒಳಗೊಳ್ಳದಿದ್ದರೆ 20ರಿಂದ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಸಮಾಜವಾದಿ ಪಕ್ಷ ಹೇಳಿದೆ.

ಎನ್‌ಸಿಪಿ (ಎಸ್‌ಪಿ) ಪಕ್ಷದ ಜಯಂತ ಪಾಟೀಲ ಅವರು ಪ್ರತಿಕ್ರಿಯಿಸಿ, ‘ಸೀಟು ಹಂಚಿಕೆ ಸೂತ್ರ ಈವರೆಗೂ ಅಂತಿಮಗೊಂಡಿಲ್ಲ. ಆದರೆ ಏನೇ ನಿರ್ಧಾರ ಕೈಗೊಂಡರೂ ಗೆಲ್ಲುವ ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಲು ತೀರ್ಮಾನಿಸಬೇಕು’ ಎಂದಿದ್ದಾರೆ.

ಮತ್ತೊಂದೆಡೆ ಬಿಜೆಪಿ, ಶಿವಸೇನಾ ಹಾಗೂ ಎನ್‌ಸಿಪಿ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಪ್ರತಿಕ್ರಿಯಿಸಿ, ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ. 7ರಿಂದ 8 ಕ್ಷೇತ್ರಗಳಲ್ಲಷ್ಟೇ ಸಮಸ್ಯೆಯಾಗಿದೆ. ನಾವು ಒಂದು ಕುಟುಂಬವಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ’ ಎಂದಿದ್ದಾರೆ.

ಬಿಜೆಪಿಯು ಈವರೆಗೂ 121 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹಾಗೂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವು ತಲಾ 45 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ.

ಒಟ್ಟು ಎಂವಿಎ ಅಖಾಡದಲ್ಲಿ ಕಾಂಗ್ರೆಸ್‌ 71, ಎನ್‌ಸಿಪಿ (ಎಸ್‌ಪಿ) 67 ಹಾಗೂ ಶಿವಸೇನಾ (ಯುಬಿಟಿ) 65 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 105 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಶಿವಸೇನಾ (ಅವಿಭಜಿತ) 56 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದವು. ಕಾಂಗ್ರೆಸ್‌ 44 ಹಾಗೂ ಎನ್‌ಸಿಪಿ (ಅವಿಭಜಿತ) 54 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.