ಪುಣೆ: ಶಿವಸೇನೆ, ಬಿಜೆಪಿ ಮತ್ತು ಎನ್ಸಿಪಿ (ಅಜಿತ್ ಪವಾರ್ ಬಣ) ಮಧ್ಯೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿ ಆಡಳಿತಾರೂಢ ‘ಮಹಾಯುತಿ’ ಮೈತ್ರಿಯು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮೊದಲೇ ವಿಘಟನೆಯಾಗಲಿದೆ ಎಂದು ಎನ್ಸಿಪಿ (ಶರದ್ಚಂದ್ರ ಪವಾರ್ ಬಣ) ಸೋಮವಾರ ಹೇಳಿದೆ.
ಎನ್ಸಿಪಿ (ಶರದ್ಚಂದ್ರ ಪವಾರ್ ಬಣ) ಮುಖ್ಯ ವಕ್ತಾರ ಮಹೇಶ್ ತಾಪಸೆ ಅವರು, ಪಿಡಬ್ಲ್ಯುಡಿ ಸಚಿವ ಮತ್ತು ಬಿಜೆಪಿ ನಾಯಕ ರವೀಂದ್ರ ಚವಾಣ್ ಅವರನ್ನು ಶಿವಸೇನೆ ನಾಯಕ ರಾಮದಾಸ್ ಕದಮ್ ಅವರು ಟೀಕಿಸಿದ್ದು ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬೆಂಗಾವಲು ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿದ್ದನ್ನು ಉಲ್ಲೇಖಿಸಿ ಹೀಗೆ ಹೇಳಿದರು.
ಕದಮ್ ಅವರ ಹೇಳಿಕೆಯು ‘ಮಹಾಯುತಿ’ಯಲ್ಲಿ ಒಡಕು ಮೂಡಿರುವುದರ ಸಂಕೇತ ಎಂದು ತಾಪಸೆ ಹೇಳಿದರು.
‘ಮಹಾಯುತಿ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ, ಪರಸ್ಪರ ಗೌರವ ಇಲ್ಲ ಮತ್ತು ಮಹಾರಾಷ್ಟ್ರ ಜನರ ಬಗ್ಗೆ ಪ್ರಾಮಾಣಿಕ ಕಾಳಜಿ ಇಲ್ಲ’ ಎಂದು ಆರೋಪಿಸಿದರು.
‘ಶನಿವಾರ ನಡೆದ ‘ಲಡಕಿ ಬಹಿನ್’ ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕರು, ಶಾಸಕರು ಮತ್ತು ಸಂಸದರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿರಲಿಲ್ಲ. ಆಡಳಿತಾರೂಢ ಮೈತ್ರಿಗೆ ಜನರ ಸೇವೆ ಮಾಡುವುದಕ್ಕಿಂತ ರಾಜಕೀಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇರುವುದು ತೋರುತ್ತದೆ’ ಎಂದು ಹೇಳಿದರು.
ಅಧಿಕಾರವನ್ನು ಪಡೆಯಲು ಮತ್ತು ಕಾನೂನಿನ ಕುಣಿಕೆಯಿಂದ ತನ್ನ ಸದಸ್ಯರನ್ನು ರಕ್ಷಿಸುವ ಉದ್ದೇಶದಿಂದಷ್ಟೇ ‘ಮಹಾಯುತಿ ಮೈತ್ರಿ’ ಸ್ಥಾಪನೆಯಾಗಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.