ಬಾರಬಂಕಿ (ಉತ್ತರ ಪ್ರದೇಶ): ಪರಸ್ಪರ ಕಿತ್ತಾಡಿಕೊಂಡು ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ಬರುವ ವೇಳೆ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಬೀಡಾಡಿ ದನಗಳಿಗೆ ಬೈಕ್ ಗುದ್ದಿದ ಪರಿಣಾಮಕಾನ್ಸ್ಟೆಬಲ್ ಸಾವಿಗೀಡಾಗಿದ್ದಾರೆ. ರಾಜ್ ಕುಮಾರ್ ಪಾಂಡೆ ಮೃತ ದುರ್ದೈವಿ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಇಲ್ಲಿನ ಹೋಟೆಲ್ ಹೊರಭಾಗದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪು ಪರಿಸ್ಪರ ಹೊಡೆದಾಟ ನಡೆಸಿದ್ದರು. ಈ ವೇಳೆ ಸುಯಾಶ್ (25) ಮತ್ತು ಅಲೋಕ್ (26) ಎಂಬವರು ಗಾಯಗೊಂಡಿದ್ದರು.ಕಾನ್ಸ್ಟೆಬಲ್ ರಾಜ್ ಕುಮಾರ್ ಪಾಂಡೆ ಮತ್ತು ಜಯಶ್ ರಾಮ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಯಾಶ್ ಮೃತಪಟ್ಟಿದ್ದಾನೆ.
ಈ ಮಧ್ಯೆ ಆಸ್ಪತ್ರೆಯಿಂದ ವಾಪಸ್ ಬರುವ ವೇಳೆ ದ್ವಿಚಕ್ರ ವಾಹನವು ಬೀಡಾಡಿ ದನಗಳಿಗೆ ಗುದ್ದಿದ ಪರಿಣಾಮ ಇಬ್ಬರು ಕಾನ್ಸ್ಟೆಬಲ್ಗಳು ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಲಖನೌನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಾನ್ಸ್ಟೆಬಲ್ ಪಾಂಡೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪೂರ್ಣೇಂದು ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.