ಇಂದೋರ್, ಮಧ್ಯಪ್ರದೇಶ: ನಾಯಿಯೊಂದು ತನ್ನನ್ನು ನೋಡಿ ನಿರಂತರವಾಗಿ ಬೊಗಳಿದ್ದಕ್ಕೆ ಸಿಟ್ಟಿಗೆದ್ದ ಯುವಕನೊಬ್ಬ ನಾಯಿ ಸಾಕಿದ್ದ ಮಹಿಳೆಯೊಂದಿಗೆ ವಾಗ್ವಾದ ನಡೆಸಿ ಬಳಿಕ ಆಕೆಯನ್ನು ಒದ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶಾಂತಿನಗರದ ನಿವಾಸಿಯಾಗಿರುವ ಯುವಕ ಶನಿವಾರ ರಾತ್ರಿ ತನ್ನ ಅಂಗಡಿ ಮುಚ್ಚಿ ಮನೆಗೆ ತೆರಳುವಾಗ ಆತನನ್ನು ನೋಡಿ ನಾಯಿ ನಿರಂತರವಾಗಿ ಬೊಗಳತೊಡಗಿತು. ಇದೇ ಕಾರಣಕ್ಕೆ ಯುವಕ ರಸ್ತೆಯಲ್ಲಿ ಮುಂದೆ ಹೋಗಲು ಆಗಲಿಲ್ಲ. ಆತ ಜೋರಾಗಿ ಕಿರುಚತೊಡಗಿದ.
ಆಗ ನಾಯಿಯನ್ನು ಸಾಕಿದ್ದ ಮಹಿಳೆ (65) ಮನೆಯಿಂದ ಹೊರಬಂದರು. ಈ ವೇಳೆ ಅವರೊಂದಿಗೆ ವಾಗ್ವಾದ ನಡೆಸಿದ ಯುವಕ ಆಕೆಯ ಹೊಟ್ಟೆಗೆ ಒದ್ದ ಕಾರಣ ಮಹಿಳೆ ರಸ್ತೆಯಲ್ಲಿ ಬಿದ್ದರು ಎಂದು ಆಜಾದ್ನಗರ ಪೊಲೀಸ್ಠಾಣೆಯ ನೀರಜ್ ಮೆಧಾ ತಿಳಿಸಿದ್ದಾರೆ.
ಮಹಿಳೆಯನ್ನು ಕೆಲವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಲ್ಲಿ ಅವರು ಮೃತಪಟ್ಟರು. ಯುವಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.