ADVERTISEMENT

ಕಲ್ಲು ಗಣಿಯಲ್ಲಿ ‌ಮಲಗಿ ವಿರಮಿಸುತ್ತಿದ್ದ ದಲಿತನ ಮುಖಕ್ಕೆ ಮೂತ್ರ ವಿಸರ್ಜನೆ

ಪಿಟಿಐ
Published 3 ಜೂನ್ 2024, 15:45 IST
Last Updated 3 ಜೂನ್ 2024, 15:45 IST
   

ಲಖನೌ: ಕಲ್ಲುಗಣಿಯಲ್ಲಿ ‌ಮಲಗಿ ವಿರಮಿಸುತ್ತಿದ್ದ ದಲಿತ ದಿನಗೂಲಿ ಕಾರ್ಮಿಕರೊಬ್ಬರನ್ನು ಎಚ್ಚರಗೊಳಿಸಲು, ಅವರ ಮುಖದ ಮೇಲೆ ಮಾಲೀಕನು ಮೂತ್ರ ವಿಸರ್ಜನೆ ಮಾಡಿರುವ ಕೃತ್ಯ ಇಲ್ಲಿ ನಡೆದಿದೆ.

ಲಖನೌದ ಚಂದೋಯಿಯ ಖೇಡಾ ಗ್ರಾಮದಲ್ಲಿ ಇರುವ ಕಲ್ಲುಗಣಿಯಲ್ಲಿ ಭಾನುವಾರ ಕೃತ್ಯ ನಡೆದಿದೆ. ಮಧ್ಯಾಹ್ನ ಊಟದ ಬಳಿಕ ದಿನಗೂಲಿ ಕಾರ್ಮಿಕ ಮಲಗಿದ್ದರು.

ರಾಜಕುಮಾರ್ ರಾವತ್ ಸಂತ್ರಸ್ತ ಕಾರ್ಮಿಕನಾಗಿದ್ದು, ಇವರು ಕುಟುಂಬದ ಜೊತೆಗೆ ಕಲ್ಲುಗಣಿಯ ಸಮೀಪವೇ ವಾಸವಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಕಲ್ಲುಗಣಿಯ ಮಾಲೀಕ ಸಂಜಯ್‌ ಮೌರ್ಯ ಕೃತ್ಯ ಎಸಗಿದ ಆರೋಪಿ. ಕೃತ್ಯವನ್ನು ಸ್ವತಃ ಚಿತ್ರೀಕರಿಸಿ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾನೆ. ಅದು, ವ್ಯಾಪಕವಾಗಿ ಹಂಚಿಕೆಯಾಗಿದೆ.

‘ಕೃತ್ಯದ ಬಳಿಕ ನನ್ನ ಪತಿ ಮಾಲೀಕನ ಜೊತೆಗೆ ಜಗಳ ಮಾಡಿದರು. ಇದಕ್ಕಾಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ಸಂತ್ರಸ್ತನ ಪತ್ನಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಆರೋಪಿ ರಾವತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದಕ್ಕೂ ಮುನ್ನ ಮೂತ್ರ ವಿಸರ್ಜನೆ ಮಾಡಿದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದೂ ಕಲ್ಲುಗಣಿ ಮಾಲೀಕನ ಕುಟುಂಬದ ಸದಸ್ಯರು ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಕಳೆದ ವರ್ಷ ಇಂತಹುದೇ ಕೃತ್ಯ ನಡೆದಿತ್ತು. ಅಂದು, ಪಾದಚಾರಿ ರಸ್ತೆಯಲ್ಲಿ ಕುಳಿತಿದ್ದ ಬುಡಕಟ್ಟು ಸಮುದಾಯದ ಯುವಕನ ಮೇಲೆ ಸರ್ವರ್ಣೀಯನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ. ತನ್ನ ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.