ನವದೆಹಲಿ: ಮಣಿಪುರದ ಇಂಫಾಲದ ಪ್ಯಾಲೇಸ್ ಗ್ರೌಂಡ್ನಿಂದ 'ಭಾರತ್ ಜೋಡೊ ನ್ಯಾಯ ಯಾತ್ರೆ' ಆರಂಭಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಹಾಗೂ ಕೆ.ಸಿ. ವೇಣುಗೋಪಾಲ್, ಭಾರತ್ ಜೋಡೊ ನ್ಯಾಯ ಯಾತ್ರೆಯ ಕರಪತ್ರ ಹಾಗೂ ವೆಬ್ಸೈಟ್ ಅನ್ನು ಇಂದು ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ವೇಣುಗೋಪಾಲ್, ಇಂಫಾಲದ ಪ್ಯಾಲೇಸ್ ಗ್ರೌಂಡ್ನಿಂದ ಯಾತ್ರೆ ಆರಂಭಿಸಲು ಮಣಿಪುರದ ಸರ್ಕಾರ ಅವಕಾಶ ನಿರಾಕರಿಸಿದೆ ಎಂದು ಹೇಳಿದ್ದಾರೆ.
ಮಣಿಪುರದಿಂದ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಈಗ ಇಂಫಾಲದ ಮತ್ತೊಂದು ಸ್ಥಳದಿಂದ ಯಾತ್ರೆ ಆರಂಭಿಸಲು ಅವಕಾಶ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ದಕ್ಷಿಣದಿಂದ ಪೂರ್ವ ಭಾಗದವರೆಗೆ ಐದು ತಿಂಗಳವರೆಗೆ ನಡೆದ ಭಾರತ್ ಜೋಡೊ ಯಾತ್ರೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2024ರ ಜ. 14ರಿಂದ 'ಭಾರತ್ ಜೋಡೊ ನ್ಯಾಯ ಯಾತ್ರೆ' ಕೈಗೊಳ್ಳಲಿದ್ದಾರೆ.
ಮಣಿಪುರದ ಇಂಫಾಲದಿಂದ ಮುಂಬೈವರೆಗಿನ ಈ ಯಾತ್ರೆಯು 66 ದಿನಗಳವರೆಗೆ ನಡೆಯಲಿದೆ.
ರಾಹುಲ್ ಅವರ ಈ ಎರಡನೇ ಯಾತ್ರೆಯು ಪೂರ್ವದಿಂದ ಪಶ್ಚಿಮದವರೆಗೆ 110 ಜಿಲ್ಲೆಗಳಲ್ಲಿ, 100 ಲೋಕಸಭಾ ಕ್ಷೇತ್ರಗಳಲ್ಲಿ 6,713 ಕಿ.ಮೀ ಕ್ರಮಿಸಲಿದೆ. ಯಾತ್ರೆಯು ಹೈಬ್ರಿಡ್ ಮಾದರಿಯಲ್ಲಿ ಇರಲಿದ್ದು ಬಸ್ ಸಂಚಾರ ಮತ್ತು ಪಾದಯಾತ್ರೆ ಎರಡನ್ನೂ ಒಳಗೊಂಡಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.