ADVERTISEMENT

ಪ್ರತಿಭಟನಕಾರರಿಂದ ನಮ್ಮ ಮೇಲೆ ದಾಳಿ: ಮಣಿಪುರ ಪೊಲೀಸ್‌ ಕಳವಳ

ಪಿಟಿಐ
Published 15 ಸೆಪ್ಟೆಂಬರ್ 2024, 15:47 IST
Last Updated 15 ಸೆಪ್ಟೆಂಬರ್ 2024, 15:47 IST
ಮಣಿಪುರದಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ )
ಮಣಿಪುರದಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ )   

ಇಂಫಾಲ್: ಪ್ರತಿಭಟನಾ ಸ್ಥಳದಲ್ಲಿ ನಿಯೋಜನೆಗೊಳ್ಳುವ ಭದ್ರತಾ ಸಿಬ್ಬಂದಿ ಮೇಲೆ ಪ್ರತಿಭಟನಕಾರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುತ್ತಾರೆ. ಪೊಲೀಸರು ಸಮಾಜದ ಭಾಗವೇ ಹೊರತು ಶತ್ರುಗಳಲ್ಲ ಎಂದು ಮಣಿಪುರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ರೀತಿ ದಾಳಿ ನಡೆಸದಂತೆ ಪ್ರತಿಭಟನಕಾರರನ್ನು ಒತ್ತಾಯಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಡಿಐಜಿ (ರೇಂಜ್‌ 1) ಎನ್‌ ಹೆರೋಜಿತ್‌ ಸಿಂಗ್‌ ಅವರು ‘ಇತ್ತೀಚೆಗೆ ಪ್ರತಿಭಟನೆಗಳ ಸ್ವರೂಪವು ಬದಲಾಗಿದೆ. ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸುವುದು, ಅವರನ್ನು ಗುರಿಯಾಗಿಸಿ ಸ್ಲಿಂಗ್‌ಶಾಟ್‌ಗಳಿಂದ ಕಬ್ಬಿಣದ ತುಂಡುಗಳನ್ನು ಹಾರಿಸುವುದು, ಆಶ್ರವಾಯು ಶೆಲ್‌ಗಳನ್ನು ಸಿಡಿಸುವುದು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ಬಳಸುವುದನ್ನು ಕಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಸಶಸ್ತ್ರ ದಾಳಿಗಳ ವಿರುದ್ಧ ಹೋರಾಡುವುದು ಪೊಲೀಸರ ಕರ್ತವ್ಯ. ಇಂತಹ ಸಮಯದಲ್ಲಿ ನಾವು ನಮ್ಮ ಅನೇಕ ಸಿಬ್ಬಂದಿಯ ಸಾವು–ನೋವುಗಳನ್ನು ಕಂಡಿದ್ದೇವೆ. ಪ್ರತಿಭಟನಕಾರರು ಶಸ್ತ್ರಾಸ್ತ್ರಗಳನ್ನು ಬಳಸಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ. ಖಬೀಸೊಯ್‌ನಲ್ಲಿ ಇಂಫಾಲ್‌ನ ಪೂರ್ವ ಕಮಾಂಡೊ ಉಸ್ತುವಾರಿ ಅಧಿಕಾರಿ ಹಾಗೂ ಇನ್ನೊಬ್ಬ ಸಿಬ್ಬಂದಿ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆಸಲಾಯಿತು. ಘಟನೆಯಲ್ಲಿ ಅವರು ಗಾಯಗೊಂಡರು. ಇಂಫಾಲ್‌ ಪಶ್ಚಿಮ ಜಿಲ್ಲೆಯ ಕಾಕ್ವಾದಲ್ಲಿ ಇತ್ತೀಚೆಗೆ ನಮ್ಮ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಲಾಯಿತು’ ಎಂದರು. 

ADVERTISEMENT

‘ಪ್ರತಿಭಟನೆ ವೇಳೆ ಸ್ಥಳೀಯರಲ್ಲದೇ ಹೊರಗಿನಿಂದ ಬಂದಿದ್ದವರನ್ನು ನಾವು ವಶಕ್ಕೆ ಪಡೆದಿದ್ದೇವೆ. ನಿಮ್ಮ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಸುವ ಪ್ರತಿಭಟನೆಯನ್ನು ಪ್ರಜಾಸತ್ತಾತ್ಮಕ ಮತ್ತು ಅಹಿಂಸಾತ್ಮಕವಾಗಿ ನಡೆಸಿ ಎಂದು ಜನರಲ್ಲಿ ನನ್ನ ವಿನಂತಿ. ಪ್ರತಿಭಟನಾಕಾರರ ಬಳಿ ಪೊಲೀಸರು ಹೆಚ್ಚಿನ ಸಂಯಮ ಕಾಯ್ದುಕೊಳ್ಳುತ್ತಾರೆ. ಅಂತೆಯೇ ಸಂಯಮ ಕಾಯ್ದುಕೊಳ್ಳಿ’ ಎಂದು ಮನವಿ ಮಾಡಿದರು. 

ಮುಂದೆ ಹೀಗೆ ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.