ADVERTISEMENT

ಮಣಿಪುರ: ಬಂದ್‌ನಿಂದಾಗಿ ಜನಜೀವನಕ್ಕೆ ಅಡ್ಡಿ

ಪಿಟಿಐ
Published 28 ಸೆಪ್ಟೆಂಬರ್ 2024, 16:27 IST
Last Updated 28 ಸೆಪ್ಟೆಂಬರ್ 2024, 16:27 IST
   

ಇಂಫಾಲ: ಕುಕಿ–ಜೊ ಸಮುದಾಯಕ್ಕೆ ಸೇರಿದ ಸಂಘಟನೆಗಳು ಕರೆ ನೀಡಿದ್ದ ಬಂದ್‌ ಕಾರಣದಿಂದಾಗಿ ಮಣಿಪುರದ ಚುರಾಚಾಂದ್‌ಪುರ ಮತ್ತು ಕಾಂಗ್‌ಪೊಕ್‌ಪಿ ಜಿಲ್ಲೆಗಳಲ್ಲಿ ಶನಿವಾರ ಜನಜೀವನಕ್ಕೆ ಅಡ್ಡಿ ಉಂಟಾಯಿತು. ಜಿರೀಬಾಮ್‌ನ ಗ್ರಾಮವೊಂದರಲ್ಲಿ ಹಿಂಸಾಚಾರ ನಡೆಯಿತು.

ಉಗ್ರರು ಗಡಿಯಾಚೆಯಿಂದ ರಾಜ್ಯ ಪ್ರವೇಶಿಸುತ್ತಿದ್ದಾರೆ ಎಂದು ಭದ್ರತಾ ಸಲಹೆಗಾರ ಕುಲದದೀಪ್ ಸಿಂಗ್ ಅವರು ಹೇಳಿದ್ದನ್ನು ಖಂಡಿಸಿ ಈ ಬಂದ್‌ಗೆ ಕರೆ ನೀಡಲಾಗಿತ್ತು. ಎರಡೂ ಜಿಲ್ಲೆಗಳಲ್ಲಿ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಮಳಿಗೆಗಳು ಬಾಗಿಲು ಮುಚ್ಚಿದ್ದವು. ರಸ್ತೆಗಳು ವಾಹನಗಳಿಲ್ಲದೆ ಬಿಕೊ ಎನ್ನುತ್ತಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾನುವಾರವೂ ಬಂದ್ ಇರಲಿದೆ. 

ಜಿರೀಬಾಮ್ ಜಿಲ್ಲೆಯ ಗ್ರಾಮವೊಂದರಲ್ಲಿ ಹಿಂಸಾಚಾರ ನಡೆದಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ಮೊಂಗ್‌ಬಂಗ್ ಗ್ರಾಮದ ಮೇಲೆ ಸನಿಹದ ಬೆಟ್ಟಗಳಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಗ್ರಾಮದ ಸ್ವಯಂಸೇವಕರು ಕೂಡ ತಿರುಗೇಟು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಹಿಂಸಾಚಾರ ನಡೆದ ನಂತರ ಮಹಿಳೆಯರು, ಮಕ್ಕಳು ಮತ್ತು ಹಿರಿಯರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.