ADVERTISEMENT

ಕೋಲ್ಕತ್ತ ವೈದ್ಯರ ಮುಷ್ಕರ: CM ಮಮತಾ ಬ್ಯಾನರ್ಜಿ ನಿವಾಸದಲ್ಲಿ ವೈದ್ಯರ ಸಭೆ ಆರಂಭ

ಪಿಟಿಐ
Published 16 ಸೆಪ್ಟೆಂಬರ್ 2024, 14:05 IST
Last Updated 16 ಸೆಪ್ಟೆಂಬರ್ 2024, 14:05 IST
<div class="paragraphs"><p>ಪಶ್ಚಿಮ ಬಂಗಾಳದ ಕೋಲ್ಕತ್ತದ ಕಾಳಿಘಾಟ್‌ನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಸೋಮವಾರ ಸಂಜೆ ಹೊರಟ ಮುಷ್ಕರ ನಿರತ ವೈದ್ಯರ ತಂಡ</p></div>

ಪಶ್ಚಿಮ ಬಂಗಾಳದ ಕೋಲ್ಕತ್ತದ ಕಾಳಿಘಾಟ್‌ನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಸೋಮವಾರ ಸಂಜೆ ಹೊರಟ ಮುಷ್ಕರ ನಿರತ ವೈದ್ಯರ ತಂಡ

   

ಪಿಟಿಐ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿರುವ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರ ಕೈಬಿಡುವಂತೆ ಮಾಡಿಕೊಂಡ ಮನವಿಯ ಭಾಗವಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕೃತ ನಿವಾಸದಲ್ಲಿ ಸೋಮವಾರ ಸಂಜೆ ಸಭೆ ಆರಂಭಗೊಂಡಿದೆ.

ADVERTISEMENT

ವೈದ್ಯರೊಂದಿಗೆ ಮಾತುಕತೆಗೆ ನಡೆದ ಸತತ ನಾಲ್ಕು ಪ್ರಯತ್ನಗಳ ನಂತರ, ಸೋಮವಾರ ಸಂಜೆ ಕಾಲಘಾಟ್‌ನಲ್ಲಿರುವ ಮುಖ್ಯಮಂತ್ರಿ ಮನೆಗೆ ವೈದ್ಯರು ಸಭೆಗೆ ತೆರಳಿದ್ದಾರೆ. ಈ ಹಿಂದೆ ಕರೆಯಲಾಗಿದ್ದ ಸಭೆಯ ನೇರ ಪ್ರಸಾರಕ್ಕೆ ರಾಜ್ಯ ಸರ್ಕಾರ ಅವಕಾಶವಿಲ್ಲ ಎಂದಿದ್ದಕ್ಕೆ ವೈದ್ಯರು ಹೊರನಡೆದಿದ್ದರು. ಇದೀಗ ತಮ್ಮ ಷರತ್ತು ಸಡಿಲಿಸಲು ವೈದ್ಯರು ನಿರ್ಧರಿಸಿದ್ದಾರೆ. ಆದರೆ ಸಭೆಯಲ್ಲಿ ನಡೆದ ಚರ್ಚೆಗಳನ್ನು ದಾಖಲಿಸಿ ಅದಕ್ಕೆ ಸಹಿ ಹಾಕುವ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರವೂ ಒಪ್ಪಿಗೆ ಸೂಚಿಸಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ವೈದ್ಯರ ಬೇಡಿಕೆಯನ್ನು ಒಪ್ಪಿಕೊಂಡಿರುವುದಾಗಿ ಹಾಗೂ ಸಭೆಯ ನಡಾವಳಿಯ ಸಹಿ ಹಾಕಿದ ಪ್ರತಿಯನ್ನು ಸರ್ಕಾರ ಹಾಗೂ ವೈದ್ಯರಿಗೆ ನೀಡಲಾಗುವುದು ಎಂದಿದ್ದಾರೆ.

ಮತ್ತೊಂದೆಡೆ ರಾಜ್ಯದ ಸ್ವಾಸ್ಥ್ಯ ಸೌಧದ ಎದುರು ವೈದ್ಯರು ಮುಷ್ಕರವನ್ನು ಮುಂದುವರಿಸಿದ್ದಾರೆ. ವೈದ್ಯರು ಮುಷ್ಕರ ಆರಂಭಿಸಿ ಈವರೆಗೂ 8 ದಿನಗಳು ಕಳೆದಿವೆ ಹಾಗೂ ಕೆಲಸದಿಂದ ದೂರ ಉಳಿದು 36 ಗಂಟೆಗಳು ಕಳೆದಿವೆ. 

ಆರ್‌.ಜಿ. ಕರ್ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೆಲಸದಿಂದ ತೆಗೆಯುವಂತೆ ವೈದ್ಯರು ಪಟ್ಟು ಹಿಡಿದಿದ್ದಾರೆ. 

ಪ್ರತಿಭಟನಾ ಸ್ಥಳಕ್ಕೆ ಶನಿವಾರ ದಿಢೀರನೆ ಭೇಟಿ ನೀಡಿದ ಮುಖ್ಯಮಂತ್ರಿ, ಮುಷ್ಕರ ನಿರತರ ಬೇಡಿಕೆಗಳನ್ನು ಈಡೇರಿಸುವ ಕುರಿತು ಭರವಸೆ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.