ಲಖನೌ, ಉತ್ತರಪ್ರದೇಶ: ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಹಿಂದೆಯೇ, ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯದ ಬುಲಂದಶಹರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚುನಾವಣಾ ಕಹಳೆ ಮೊಳಗಿಸಿದರು.
ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು. ಇದೇವೇಳೆ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
‘ಮೋದಿ ಚುನಾವಣಾ ಕಹಳೆ ಮೊಳಗಿಸುತ್ತಾರೆ ಎಂದು ಕೆಲ ಚಾನಲ್ಗಳು ವರದಿ ಮಾಡಿವೆ. ಆದರೆ, ಮೋದಿ ಅಭಿವೃದ್ಧಿಯ ಕಹಳೆ ಮೊಳಗಿಸ್ತಾರೆ. ಚುನಾವಣಾ ಕಹಳೆ ಮೊಳಗಿಸುವ ಜರೂರತ್ತು ಮೋದಿಗಿಲ್ಲ. ಅದನ್ನು ಜನರೇ ಮೋದಿಗಾಗಿ ಮಾಡುತ್ತಾರೆ‘ ಎಂದು ಹೇಳಿದರು.
ನ್ಯೂ ಕುರ್ಜಾ ಮತ್ತು ನ್ಯೂ ರೆವರಿ ನಡುವಿನ 173 ಕಿ.ಮೀ. ಉದ್ದದ ನೂತನ ವಿದ್ಯುತ್ಚಾಲಿತ ರೈಲ್ವೆ ಜೋಡಿ ಮಾರ್ಗದಲ್ಲಿ ಎರಡು ಗೂಡ್ಸ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ತಮ್ಮ ಭಾಷಣದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ವಿಷಯ ಪ್ರಸ್ತಾಪಿಸಿದ ಅವರು, ‘ದೇಶದ ಪ್ರತಿಷ್ಠೆಯನ್ನು ಪ್ರತಿಷ್ಠಾಪಿಸುವ ಕಾಲ ಈಗ ಬಂದಿದೆ. ನಮ್ಮ ಗುರಿ 2047ರ ವೇಳೆಗೆ ಭಾರತನ್ನು ಅಭಿವೃದ್ಧಿ ರಾಷ್ಟ್ರವಾಗಿಸುವುದೇ ಆಗಿದೆ’ ಎಂದು ಹೇಳಿದರು.
‘ಜಾತಿಗಣತಿ ಬೇಡಿಕೆ ಉಲ್ಲೇಖಿಸಿ ಪ್ರತಿಪಕ್ಷಗಳನ್ನು ಟೀಕಿಸಿದ ಪ್ರಧಾನಿ, ‘ಸುದೀರ್ಘ ಕಾಲ ಆಡಳಿತ ನಡೆಸಿದ ಪಕ್ಷಗಳು ರಾಜನಂತೆ ವರ್ತಿಸಿವೆ. ಅವುಗಳಿಗೆ ಅಧಿಕಾರ ಗಳಿಸುವ ಸುಲಭ ಮಾರ್ಗವೆಂದರೆ ಜನರನ್ನು ನಿರ್ಗತಿಕರಾಗೇ ಇರಿಸುವುದು, ಸಮಾಜವನ್ನು ಒಡೆಯುವುದು. ಇದರ ಪರಿಣಾಮವನ್ನು ದೇಶ ಮತ್ತು ಹಲವು ಪೀಳಿಗೆಗಳು ಎದುರಿಸಿವೆ’ ಎಂದರು.
ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಕೆಲವು ಪಕ್ಷಗಳು ಗರೀಬಿ ಹಟಾವೊ ಹೆಸರಿನಲ್ಲಿ ಕಲವೇ ಜನರನ್ನು ಶ್ರೀಮಂತರಾಗಿಸಿವೆ. ಹಲವು ವರ್ಷ ಇವರು ಗರೀಬಿ ಹಟಾವೊ ಮಂತ್ರ ಜಪಿಸಿದರು. ಆದರೆ, ಲಾಭವನ್ನು ಕೆಲವೇ ಜನರು ಪಡೆದುಕೊಂಡರು ಎಂದು ತರಾಟೆಗೆ ತೆಗೆದುಕೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.