ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಹಣವನ್ನು ಯುವಜನರ ಉದ್ಯೋಗ ಸೃಷ್ಟಿಗೆ ಬಳಸುವ ಬದಲು ತಮ್ಮ ಪ್ರಚಾರ ಹಾಗೂ ಜಾಹೀರಾತಿಗೆ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಇಲ್ಲಿ ನಡೆದ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಅಯೋಧ್ಯೆಯಲ್ಲಿ ಮೋದಿ ಅವರು ಗರ್ಭ ಗುಡಿಯಲ್ಲಿ ಏಕಾಂಗಿಯಾಗಿ ಪೂಜೆ ನೆರವೇರಿಸಿದರು. ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಇರಲಿಲ್ಲ. ತಮ್ಮ ಸಂಪುಟದ ಸಚಿವರು ಅಲ್ಲಿಗೆ ಬರುವುದಕ್ಕೂ ಮೋದಿ ಸಮ್ಮತಿಸಲಿಲ್ಲ. ಅವರು ಅಲ್ಲಿ ಒಬ್ಬರೇ ಇದ್ದರು. ದೇವರು ದೇಶದ ಎಲ್ಲ ಮನೆಗಳಲ್ಲೂ ಇದ್ದಾರೆ. ಆದರೆ, ಮೋದಿ ಅವರು ದೇವರು ತನ್ನ ಸನಿಹ ಇದ್ದಾನೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಹಸಿದವರಿಗೆ ಅನ್ನ ಕೊಡಬೇಕು. ನಿರುದ್ಯೋಗಿಗೆ ಉದ್ಯೋಗ ಕೊಡಬೇಕು. ಆದರೆ, ಮೋದಿ ಅವರು ತಮ್ಮ ಸಮಯವನ್ನು ರಾಜಕಾರಣ ಮತ್ತು ಪ್ರಚಾರಕ್ಕೆ ಬಳಸುತ್ತಿದ್ದಾರೆ. ಜನರ ಹಣದಲ್ಲಿ ಅವರು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ‘ ಎಂದು ಖರ್ಗೆ ಟೀಕಿಸಿದರು.
‘ಮೋದಿ ಮತ್ತು ಅಮಿತ್ ಶಾ ಅವರು ಇ.ಡಿ, ಐ.ಟಿ, ಸಿಬಿಐ ಬಳಸಿ ಸರ್ಕಾರಗಳನ್ನು ಉರುಳಿಸಬಲ್ಲರು‘ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಖರ್ಗೆ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.