ಮುಂಬೈ: ಭಾರಿ ಬಿರುಗಾಳಿ ಸಹಿತ ಮಳೆಯಿಂದಾಗಿ ಮುಂಬೈನ ಚೆಡ್ಡಾನಗರದಲ್ಲಿ ಪೆಟ್ರೋಲ್ ಪಂಪ್ ಮೇಲೆ ಬಿದ್ದ ಬೃಹತ್ ಜಾಹೀರಾತು ಫಲಕದ ಕೆಳಗೆ ಸಿಲುಕಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಇಂದು ಮೃತಪಟ್ಟಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜು ಸೋನಾವಾನೆ (52) ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಘಟನೆ ಸಂಬಂಧ ಈವರೆಗೆ ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. 75 ಜನರು ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋರ್ಡಿಂಗ್ ಬಿದ್ದಿರುವ ಪ್ರಕರಣ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಮುಂಬೈ ಅಪರಾಧ ವಿಭಾಗ ರಚಿಸಿದೆ. ಆರು ಅಧಿಕಾರಿಗಳನ್ನು ಒಳಗೊಂಡಿರುವ ಎಸ್ಐಟಿ ತಂಡವು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದೆ.
ಹೋರ್ಡಿಂಗ್ ಹಾಕಿದ್ದ ಕಂಪನಿಯ ಮಾಲೀಕ ಭವೇಶ್ ಭಿಡೆ ಅವರನ್ನು ಮುಂಬೈ ಪೊಲೀಸರು ಕಳೆದ ವಾರ ರಾಜಸ್ಥಾನದ ಉದಯಪುರದಿಂದ ಬಂಧಿಸಿ ಮುಂಬೈಗೆ ಕರೆತಂದಿದ್ದರು.
ಭವೇಶ್ ಭಿಂಡೆ ಅವರು ಹೋರ್ಡಿಂಗ್ ಗುತ್ತಿಗೆಯನ್ನು ಹೇಗೆ ಪಡೆದರು ಮತ್ತು ಇದರಿಂದ ಎಷ್ಟು ಹಣ ಪಡೆದರು ಎಂಬುದರ ಕುರಿತಾಗಿಯೂ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೇ 13ರಂದು ಮುಂಬೈಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದ ವೇಳೆ ಘಾಟ್ಕೋಪರ್ನಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್ ಪಂಪ್ ಮೇಲೆ ಬಿದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.