ADVERTISEMENT

ಮುಂಬೈನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ನಗರದ ಹಲವು ರಸ್ತೆಗಳು ಜಲಾವೃತ l ಹಲವು ವಿಮಾನಗಳ ಮಾರ್ಗ ಬದಲು

ಪಿಟಿಐ
Published 21 ಜುಲೈ 2024, 15:50 IST
Last Updated 21 ಜುಲೈ 2024, 15:50 IST
<div class="paragraphs"><p>ಮುಂಬೈನಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ನಗರದ ರಸ್ತೆಯೊಂದರಲ್ಲಿ ಮೊಣಕಾಲುವರೆಗೆ ನೀರು ನಿಂತಿದ್ದು, ಬಸ್ಸಿನ ಚಕ್ರಗಳು ಭಾಗಶಃ ಮುಳುಗಿವೆ  </p></div>

ಮುಂಬೈನಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ನಗರದ ರಸ್ತೆಯೊಂದರಲ್ಲಿ ಮೊಣಕಾಲುವರೆಗೆ ನೀರು ನಿಂತಿದ್ದು, ಬಸ್ಸಿನ ಚಕ್ರಗಳು ಭಾಗಶಃ ಮುಳುಗಿವೆ

   

–ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ವಿಮಾನ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಅಲ್ಲದೆ, ಹಲವು ರಸ್ತೆಗಳು ಜಲಾವೃತವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. 

ADVERTISEMENT

ದಟ್ಟ ಮೋಡದಿಂದಾಗಿ ಮಂದ ಬೆಳಕು ಮತ್ತು ಪ್ರಕ್ಷುಬ್ಧ ವಾತಾವರಣದಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಬಾರಿ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಸಂಜೆ ನಾಲ್ಕು ಗಂಟೆವರೆಗೆ 15 ವಿಮಾನಗಳನ್ನು ಮುಖ್ಯವಾಗಿ ಅಹಮಬಾದ್ ಸೇರಿದಂತೆ ಹತ್ತಿರದ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ತಿಳಿದುಬಂದಿದೆ. 

ಸಂಜೆ ನಾಲ್ಕು ಗಂಟೆವರೆಗೆ ನಗರದಲ್ಲಿ 82 ಮಿಲಿ ಮೀಟರ್, ಪೂರ್ವ ಉಪನಗರದಲ್ಲಿ 96 ಮಿಲಿ ಮೀಟರ್, ಪಶ್ಚಿಮ ಉಪನಗರದಲ್ಲಿ 90 ಮಿಲಿ ಮೀಟರ್ ಮಳೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. 

ಪಶ್ಚಿಮ ಮತ್ತು ಕೇಂದ್ರೀಯ ರೈಲ್ವೆ ಮಾರ್ಗದ ಉಪನಗರ ರೈಲು ಸಂಚಾರ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಆದರೆ, ಕುರ್ಲಾ, ಪನ್ವೆಲ್ ಮತ್ತು ಮಾನಖುರ್ದ್ ರೈಲ್ವೆ ನಿಲ್ದಾಣಗಳ ಬಳಿ ನೀರು ನಿಂತಿದ್ದರಿಂದಾಗಿ ಮುಂಬೈನ ಹಾರ್ಬರ್ ಲೈನ್‌ನಲ್ಲಿ ರೈಲುಗಳ ಸಂಚಾರದಲ್ಲಿ 15ರಿಂದ 20 ನಿಮಿಷ ವಿಳಂಬವಾಯಿತು. ಇನ್ನು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದಾಗಿ ಕೆಲವು ಬಸ್‌ಗಳ ಮಾರ್ಗಗಳನ್ನೂ ಬದಲಿಸಲಾಯಿತು ಎಂದು ತಿಳಿದುಬಂದಿದೆ.

ರತ್ನಗಿರಿಯ ಜಿಲ್ಲೆಯಲ್ಲಿ ಐದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುಂಬೈ–ಗೋವಾದ ರಸ್ತೆ ಮಾರ್ಗವು ಅಸ್ತವ್ಯಸ್ಥಗೊಂಡಿದೆ. 

ಮುಂಬೈನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಕುರ್ಲಾ ರೈಲು ನಿಲ್ದಾಣದ ಹೊರಭಾಗದ ರಸ್ತೆಯಲ್ಲಿ ನಿಂತಿರುವ ನೀರಿನಲ್ಲೇ ಜನರು ಸಂಚರಿಸಿದರು –ಪಿಟಿಐ ಚಿತ್ರ
ಮುಂಬೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುರ್ಲಾ ರೈಲು ನಿಲ್ದಾಣದ ಹೊರಭಾಗದಲ್ಲಿರುವ ಅಂಗಡಿಯೊಂದಕ್ಕೆ ನೀರು ನುಗ್ಗಿತ್ತು –ಪಿಟಿಐ ಚಿತ್ರ Mumbai: A waterlogged shop after heavy rainfall outside the Kurla station in Mumbai Sunday July 21 2024. (PTI Photo) (PTI07_21_2024_000156A)

‘ಹಿಮಾಚಲ ಪ್ರದೇಶ: ಶೇ 43ರಷ್ಟು ಮಳೆ ಕೊರತೆ’

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ನಿರೀಕ್ಷಿತ ಪ್ರಮಾಣದ ಮಳೆ ಸುರಿಸಿಲ್ಲ. ಇದರಿಂದಾಗಿ ಈವರೆಗೆ ಶೇ 43ರಷ್ಟು ಪ್ರಮಾಣದ ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಜೂನ್ 1ರಿಂದ ಜುಲೈ 21ರವರೆಗೆ ಸಾಮಾನ್ಯವಾಗಿ 266.4ರಷ್ಟು ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 151.6 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.