ಮುಂಬೈ: ‘ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹1,500 ಗೌರವಧನ ನೀಡಲು ಈಚೆಗೆ ಆರಂಭಿಸಿರುವ ‘ಲಡ್ಕೀ ಬಹೀನ್’ ಯೋಜನೆ ಕುರಿತು ‘ಮಹಾರಾಷ್ಟ್ರ ವಿಕಾಸ್ ಅಘಾಡಿ’ಯು ಅಪಪ್ರಚಾರ ಮಾಡುತ್ತಿದೆ’ ಎಂದು ಮಹಾರಾಷ್ಟ್ರದ ಬಿಜೆಪಿಯ ಹಿರಿಯ ಮುಖಂಡ ರಾವ್ಸಾಹೇಬ್ ದಾನ್ವೆ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,‘ಲಡ್ಕೀ ಬಹೀನ್’ ಯೋಜನೆಗೆ ಸಂಬಂಧಿಸಿದಂತೆ ಎಂವಿಎ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಮಹಿಳೆಯರು ತಮ್ಮ ಅರ್ಜಿಗಳನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡಬೇಕು. ವಿರೋಧ ಪಕ್ಷದ ಕಾರ್ಯಕರ್ತರಿಗೆ ಅಲ್ಲ. ಅವರು ಫಲಾನುಭವಿಗಳನ್ನು ದಾರಿ ತಪ್ಪಿಸುತ್ತಾರೆ’ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ, ಡಿಸಿಎಂ ಅಜಿತ್ ನೇತೃತ್ವದ ಎನ್ಸಿಪಿ, ಪಕ್ಷದ ಹಿರಿಯ ಮುಖಂಡರು ಸೀಟು ಹಂಚಿಕೆ ಸಂಬಂಧ ನಿರ್ಧರಿಸಲಿದ್ದಾರೆ. ನಾವು 288 ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದು ಹೇಳಿದರು.
‘ವಿರೋಧ ಪಕ್ಷದ ಒಕ್ಕೂಟದ ನಾಯಕರು ಕೇವಲ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿ ಎಲ್ಲವೂ ಚೆನ್ನಾಗಿಲ್ಲ. ಹೀಗಿರುವಾಗ ಮತದಾರರು ಏಕೆ ಅವರ ನಂಬಿಕೆ ಇಡಬೇಕು’ ಎಂದು ದಾನ್ವೆ ಪ್ರಶ್ನಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ 48 ಲೋಕಸಭಾ ಕ್ಷೇತ್ರಗಳ ಪೈಕಿ ಎಂವಿಎ ಕೂಟ 30 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.