ಮೊರೆನಾ(ಮಧ್ಯಪ್ರದೇಶ): ನನ್ನ ತಂದೆ ರಾಜೀವ್ ಗಾಂಧಿಯವರು ಅವರ ತಾಯಿ, ಇಂದಿರಾಗಾಂಧಿಯಿಂದ ಹುತಾತ್ಮತೆಯನ್ನು ಪಡೆದಿದ್ದಾರೆಯೇ ಹೊರತು ಸಂಪತ್ತನ್ನಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ತಮ್ಮ ತಾಯಿಯಿಂದ ಬಂದ ಆಸ್ತಿ ಮೇಲೆ ಪಿತ್ರಾರ್ಜಿತ ಆಸ್ತಿ ತೆರಿಗೆ ಬೀಳಬಾರದೆಂಬ ಕಾರಣಕ್ಕೆ ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದಾಗ ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದು ಮಾಡಿದರು ಎಂದು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಆರೋಪಕ್ಕೆ ಪ್ರಿಯಾಂಕಾ ಮೊರೆನಾದ ಚುನಾವಣಾ ರ್ಯಾಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ವಾರ ಮೊರೆನಾದಲ್ಲೇ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಮೋದಿ, ‘ಇಂದಿರಾ ಗಾಂಧಿಜೀ ಅವರು ತಮ್ಮ ಆಸ್ತಿಯನ್ನು ಮಗ ರಾಜೀವ್ ಗಾಂಧಿ ಹೆಸರಿಗೆ ಉಯಿಲು ಮಾಡಿದ್ದರು. ಅವರ ನಿಧನದ ನಂತರ ಸರ್ಕಾರಕ್ಕೆ ಅವರ ಸಂಪತ್ತಿನ ಭಾಗ ಸೇರುವುದನ್ನು ತಡೆಯಲು ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ರದ್ದು ಮಾಡಿದ್ದರು ಎಂಬ ಮಾತಿದೆ’ಎಂದು ಹೇಳಿದ್ದರು.
ಕಾಂಗ್ರೆಸ್, ಜನರ ಆಸ್ತಿಯನ್ನು ತೆಗೆದುಕೊಳ್ಳಲು ಮತ್ತೆ ಪ್ರಿತ್ರಾರ್ಜಿತ ಆಸ್ತಿ ತೆರಿಗೆ ಹೇರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸುವ ಭರದಲ್ಲಿ ಮೋದಿ ರಾಜೀವ್ ಗಾಂಧಿ ವಿಷಯ ಪ್ರಸ್ತಾಪಿಸಿದ್ದರು. ಇದೇ ವಿಷಯವಾಗಿ ಇಂದು ಮತ್ತೆ ಮಾತನಾಡಿರುವ ಮೋದಿ, ನೀವು ಎರಡು ಎಮ್ಮೆ ಹೊಂದಿದ್ದರೆ ಅದರಲ್ಲಿ ಒಂದನ್ನು ಕಾಂಗ್ರೆಸ್ ಕದಿಯುತ್ತದೆ ಎಂದು ಹೇಳಿದ್ದರು.
ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ‘ಮೋದಿಜೀ ನಾನು ನಿಮಗೊಂದು ಸವಾಲು ಹಾಕುತ್ತೇನೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಿಂದ ಬೀದಿ ದನಗಳನ್ನು ಒಂದೆಡೆ ಸೇರಿಸಿ ಗೋಶಾಲಾದಲ್ಲಿ ಹಾಕಿ. ತುಡುಗು ದನಗಳ ಸಮಸ್ಯೆಯನ್ನು ಬಗೆಹರಿಸಿ. ಛತ್ತೀಸ್ಗಢದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದಂತೆ ಅವುಗಳನ್ನು ರಕ್ಷಿಸಿ’ ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.