ನವದೆಹಲಿ: ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿನ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ಪತಿ ಮಾರ್ಚ್ 28ರಂದು ನ್ಯಾಯಾಲಯದಲ್ಲಿ ಮಹತ್ವದ ವಿಷಯಗಳನ್ನು ಬಹಿರಂಗಪಡಿಸಲಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಡಿಜಿಟಲ್ ವಿಧಾನದ ಮೂಲಕ ಈ ಮಾಹಿತಿ ನೀಡಿದ ಅವರು,‘ಹಗರಣಕ್ಕೆ ಸಂಬಂಧಿಸಿದ ನೈಜ ವಿವರಗಳನ್ನು ಬಹಿರಂಗಪಡಿಸುವ ಜೊತೆಗೆ, ಸಾಕ್ಷ್ಯಗಳನ್ನು ಸಹ ಹಾಜರುಪಡಿಸಲಿರುವುದಾಗಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ’ ಎಂದರು.
‘ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ಎರಡು ವರ್ಷಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ಬಾರಿ ದಾಳಿಗಳನ್ನು ನಡೆಸಿದೆ. ಈ ಯಾವುದೇ ದಾಳಿ ಸಂದರ್ಭದಲ್ಲಿಯೂ ಒಂದು ಪೈಸೆಯೂ ಪತ್ತೆಯಾಗಿಲ್ಲ ಎಂದು ಇ.ಡಿ ವಶದಲ್ಲಿರುವ ವೇಳೆ ಭೇಟಿ ಮಾಡಿದ ನನಗೆ ಕೇಜ್ರಿವಾಲ್ ತಿಳಿಸಿದ್ದರು’ ಎಂದು ಹೇಳಿದರು.
‘ಇ.ಡಿ ಅಧಿಕಾರಿಗಳು ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಹಾಗೂ ಸತ್ಯೇಂದ್ರ ಜೈನ್ ಅವರಿಗೆ ಸೇರಿದ ಸ್ಥಳಗಳ ಮೇಲೆಯೂ ದಾಳಿ ನಡೆಸಿದ್ದರು. ಅಲ್ಲಿಯೂ ಹಣ ಪತ್ತೆಯಾಗಿಲ್ಲ. ಮುಖ್ಯಮಂತ್ರಿಗಳ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಇ.ಡಿ ಅಧಿಕಾರಿಗಳಿಗೆ ಕೇವಲ ₹73 ಸಾವಿರ ಸಿಕ್ಕಿತ್ತು’ ಎಂದ ಅವರು, ‘ಅಬಕಾರಿ ಹಗರಣದ ಹಣ ಎಲ್ಲಿದೆ’ ಎಂದು ಪ್ರಶ್ನಿಸಿದರು.
‘ದೆಹಲಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬಂಧ, ಇ.ಡಿ ವಶದಲ್ಲಿರುವ ನನ್ನ ಪತಿ ಜಲ ಸಚಿವೆ ಆತಿಶಿ ಅವರಿಗೆ ನಿರ್ದೇಶನಗಳನ್ನು ನೀಡಿದ್ದರು. ನನ್ನ ಪತಿಯ ಈ ನಡೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿತ್ತು’ ಎಂದು ಹೇಳಿದ ಸುನೀತಾ, ’ಅವರು (ಕೇಂದ್ರ) ದೆಹಲಿಯನ್ನು ಹಾಳು ಮಾಡಲು ಹೊರಟಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಕೇಜ್ರಿವಾಲ್ ಧೈರ್ಯವಂತ, ಪ್ರಾಮಾಣಿಕ ಹಾಗೂ ದೇಶಪ್ರೇಮಿ. ಮಧುಮೇಹ ಇದ್ದರೂ ದೃಢಸಂಕಲ್ಪ ಹೊಂದಿದವರಾಗಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ದೆಹಲಿ ಜನರನ್ನು ಕೋರುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.