ADVERTISEMENT

ತಿರುಪತಿ ಲಾಡುವಿನಲ್ಲಿ ಪ್ರಾಣಿ ಕೊಬ್ಬು: ವರದಿ ಕೇಳಿದ ಕೇಂದ್ರ

ಪಿಟಿಐ
Published 20 ಸೆಪ್ಟೆಂಬರ್ 2024, 10:20 IST
Last Updated 20 ಸೆಪ್ಟೆಂಬರ್ 2024, 10:20 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ನವದೆಹಲಿ: ತಿರುಪತಿ ದೇವಸ್ಥಾನದ ಪ್ರಸಾದವಾದ ಲಾಡುಗಳಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂಬುದರ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರವು ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

‘ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರ ಜತೆ ಮಾತನಾಡಿದ್ದು, ವರದಿ ಕೇಳಿದ್ದೇನೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳಿಗೂ ವರದಿ ನೀಡುವಂತೆ ಸೂಚಿಸಿದ್ದೇನೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕೇಂದ್ರ ಸರ್ಕಾರದ ಅಡಿಯಲ್ಲಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಇದನ್ನು ಪರಿಶೀಲಿಸಲಿಸಿ ವರದಿ ನೀಡಲಿದೆ. ಬಳಿಕ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ADVERTISEMENT

ಪೂರೈಕೆದಾರ ಕಪ್ಪುಪಟ್ಟಿಗೆ:

ಪ್ರಯೋಗಾಲಯದಿಂದ ಬಂದ ನಾಲ್ಕು ವರದಿಗಳಲ್ಲೂ ಒಂದೇ ರೀತಿಯ ಫಲಿತಾಂಶ ವ್ಯಕ್ತವಾಗಿದೆ. ಹೀಗಾಗಿ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಕಾನೂನು ಪ್ರಕಾರ ದಂಡ ವಿಧಿಸುವುದೂ ಸೇರಿದಂತೆ ಇತರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ತುಪ್ಪದಲ್ಲಿ ಹಂದಿ ಕೊಬ್ಬು– ಟಿಟಿಡಿ ಇ.ಒ:
ಲಾಡುಗಳಿಗೆ ಬಳಸುವ ತುಪ್ಪದಲ್ಲಿ ಹಂದಿ ಕೊಬ್ಬು ಸೇರಿದಂತೆ ಇತರ ಪ್ರಾಣಿಗಳ ಕೊಬ್ಬಿನ ಅಂಶ ಇರುವುದನ್ನು ಪ್ರಯೋಗಾಲಯದ ಪರೀಕ್ಷೆಗಳು ಬಹಿರಂಗಪಡಿಸಿವೆ ಎಂದು ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜೆ. ಶ್ಯಾಮಲ ರಾವ್‌ ಶುಕ್ರವಾರ ಹೇಳಿದರು. ದೇವಸ್ಥಾನದಲ್ಲಿ ಕಲಬೆರಕೆ ಪರೀಕ್ಷೆ ಮಾಡಲು ಸೌಲಭ್ಯಗಳು ಇಲ್ಲ ಎಂಬ ಕೊರತೆಯ ಲಾಭವನ್ನು ತುಪ್ಪ ಪೂರೈಕೆದಾರರು ಪಡೆದುಕೊಂಡಿದ್ದರಿಂದ ಈ ಲೋಪ ಆಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.