ಕೋಲ್ಕತ್ತ: ಬಿಜೆಪಿಯ ಹಿರಿಯ ನಾಯಕರಾದ ಜೆ.ಪಿ. ನಡ್ಡಾ ಮತ್ತು ಅಮಿತ್ ಶಾ ಅವರು ಮಂಗಳವಾರ ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿ, ಸರಣಿ ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದರೊಂದಿಗೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಗಾಗಿ ಪಕ್ಷದ ಸಿದ್ಧತೆಗಳಿಗೆ ಚಾಲನೆ ನೀಡಿದರು.
ಸೋಮವಾರ ತಡರಾತ್ರಿಯೇ ಇಲ್ಲಿಗೆ ಬಂದ ಈ ಇಬ್ಬರು ನಾಯಕರು ಮಂಗಳವಾರ ಗುರುದ್ವಾರ ಮತ್ತು ಕಾಲಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಒಂದರ ಮೇಲೆ ಒಂದರಂತೆ ಸಂಘಟನಾ ಸಭೆಗಳನ್ನು ನಡೆಸಿದರು.
ಮುಂಬರುವ ಚುನಾವಣೆಗಾಗಿ ಸಿದ್ಧತೆ ಕೈಗೊಳ್ಳಲು 15 ಸದಸ್ಯರ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ರಾಜ್ಯದ ನಾಲ್ವರು ಕೇಂದ್ರ ಸಚಿವರ ಹೆಸರುಗಳು ಇಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿನ 42 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಪಡೆದಿತ್ತು. ಮುಂಬರುವ ಚುನಾವಣೆಯಲ್ಲಿ 35 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕೆಂಬ ಗುರಿಯನ್ನು ಅಮಿತ್ ಶಾ ಅವರು ರಾಜ್ಯ ಘಟಕಕ್ಕೆ ನಿಗದಿಪಡಿಸಿದ್ದಾರೆ.
ರಾಷ್ಟ್ರೀಯ ಗ್ರಂಥಾಲಯಲ್ಲಿ ನಡ್ಡಾ ಮತ್ತು ಶಾ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡಲು 1500 ಮಂದಿ ಮುಂದೆ ಬಂದಿದ್ದಾರೆ.
ಭ್ರಷ್ಟಾಚಾರ, ರಾಜಕೀಯದಲ್ಲಿ ಕುಟುಂಬ ಸದಸ್ಯರಿಗೆ ಉತ್ತೇಜನ ಮತ್ತು ನಿರುದ್ಯೋಗದಂತಹ ವಿಷಯಗಳನ್ನು ರಾಜ್ಯದ ಬಿಜೆಪಿ ನಾಯಕರು ಚರ್ಚಿಸಿದರು. ಮುಂದೆ ಚುನಾವಣಾ ಪ್ರಚಾರದ ವೇಳೆಯೂ ಈ ವಿಷಯಗಳು ಪ್ರಧಾನವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಪಡೆಯುವುದು ದೂರದ ಮಾತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಬಿಜೆಪಿ ನಾಯಕರನ್ನು ‘ನಿತ್ಯ ಪ್ರಯಾಣಿಸುವ ಪ್ರಯಾಣಿಕರು‘ ಎಂದು ಬಣ್ಣಿಸಿದ ಅವರು, ರಾಜ್ಯಕ್ಕೆ ಹೆಚ್ಚು ನಾಯಕರು ಭೇಟಿ ನೀಡಿದಷ್ಟೂ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದಿದ್ದಾರೆ.
* 15 ಸದಸ್ಯರ ತಂಡ ರಚನೆ
* ರಾಜ್ಯದ 42 ಕ್ಷೇತ್ರಗಳ ಪೈಕಿ 35ರಲ್ಲಿ ಗೆಲ್ಲುವ ಗುರಿ
ಪಶ್ಚಿಮಬಂಗಾಳದಲ್ಲಿ ಬಿಜೆಪಿಯು ಮೂರರಿಂದ ಐದು ಸ್ಥಾನಗಳಲ್ಲಿ ಗೆಲ್ಲುವ ಸಾಮರ್ಥ್ಯವನ್ನು ಮೊದಲು ಪ್ರದರ್ಶಿಸಲಿ
-ಕುನಾಲ್ ಘೋಷ್, ಟಿಎಂಸಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.