ADVERTISEMENT

ಮೋದಿ ‘ನರೇಂದ್ರ ವಿಧ್ವಂಸಕ ಮೈತ್ರಿಕೂಟದ’ ನಾಯಕ: ಜೈರಾಮ್‌ ರಮೇಶ್‌

ಪಿಟಿಐ
Published 9 ಜೂನ್ 2024, 14:26 IST
Last Updated 9 ಜೂನ್ 2024, 14:26 IST
<div class="paragraphs"><p>ಜೈರಾಂ ರಮೇಶ್‌</p></div>

ಜೈರಾಂ ರಮೇಶ್‌

   

ನವದೆಹಲಿ: ‘ಕಾನೂನುಬದ್ಧತೆಯ ಕೊರತೆಯಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ನರೇಂದ್ರ ವಿಧ್ವಂಸಕ ಮೈತ್ರಿಕೂಟದ’ (ಎನ್‌ಡಿಎ) ನಾಯಕ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ರಾಜ್‌ಘಾಟ್‌ಗೆ ಭೇಟಿ ನೀಡಿದ್ದನ್ನು ‘ಬೂಟಾಟಿಕೆ’ ಎಂದು ಅವರು ‘ಎಕ್ಸ್‌’ನಲ್ಲಿ ಟೀಕಿಸಿದ್ದಾರೆ.

ADVERTISEMENT

ರಿಚರ್ಡ್‌ ಅಟೆನ್‌ಬರೊ ಅವರು 1982ರಲ್ಲಿ ‘ಗಾಂಧಿ’ ಚಲನಚಿತ್ರ ನಿರ್ಮಿಸುವವರೆಗೂ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಅರಿವು ಇರಲಿಲ್ಲ ಎಂದು ಸುಳ್ಳು ಹೇಳಿದ ಮೋದಿ ಅವರು, ವಾರಾಣಸಿ, ಅಹಮದಾಬಾದ್‌ ಮತ್ತು ಇತರೆಡೆಗಳಲ್ಲಿ ಗಾಂಧಿವಾದಿ ಸಂಸ್ಥೆಗಳನ್ನು ಕೆಡವಿ, ನಾಶಪಡಿಸಿದ್ದಾರೆ. ಅಲ್ಲದೆ ಸಂಸತ್‌ ಭವನದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಒಂದಲ್ಲ, ಎರಡು ಬಾರಿ ಸ್ಥಳಾಂತರಿಸಿದ್ದಾರೆ. ಇನ್ನು ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಂ ಗೋಡ್ಸೆಯನ್ನು ನಾಯಕ ಎಂದು ಬಿಂಬಿಸುವ ತನ್ನ ಸಹೋದ್ಯೋಗಿಗಳ ವಿರುದ್ಧ ಅವರು ಚಕಾರ ಎತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 

ಅಲ್ಲದೆ, ಮೋದಿ ಅವರು 2023ರಲ್ಲಿ ಸೆಂಗೋಲ್‌ (ರಾಜದಂಡ) ಹಿಡಿದು ಹೊಸ ಸಂಸತ್ ಭವನ ಪ್ರವೇಶಿಸಿದ್ದರು. ತಮಿಳು ಇತಿಹಾಸದ ಗೌರವಾನ್ವಿತ ಸಂಕೇತವಾಗಿರುವ ಸೆಂಗೋಲ್‌ ಮೂಲಕ ತಮಿಳು ಮತದಾರರನ್ನು ಸೆಳೆಯುವ ತಂತ್ರ ಅವರದ್ದಾಗಿತ್ತು. ಆದರೆ ತಮಿಳು ಮತದಾರರ ಜತೆಗೆ ಇಡೀ ದೇಶದ ಮತದಾರರು ಮೋದಿ ಅವರ ಈ ಆಡಂಬರವನ್ನು ತಿರಸ್ಕರಿದ್ದಾರೆ ಎಂದು ರಮೇಶ್‌ ತಿಳಿಸಿದ್ದಾರೆ. 

ಮೋದಿ ಅವರು ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ಅನುಭವಿಸಿದ್ದಾರೆ ಎಂದು ಕಾಂಗ್ರೆಸ್‌ ಅವರು ಹೇಳಿದ್ದಾರೆ.

ಅತಂತ್ರ ಸರ್ಕಾರ– ಅಖಿಲೇಶ್‌ (ಲಖನೌ ವರದಿ): ನರೇಂದ್ರ ಮೋದಿ ನೇತೃತ್ವದ ಹೊಸ ಎನ್‌ಡಿಎ ಸರ್ಕಾರ ಅತಂತ್ರವಾಗಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ.

ಭದ್ರ ಬುನಾದಿ ಇಲ್ಲದೆ, ಅತಂತ್ರ ಸ್ಥಿತಿಯಲ್ಲಿರುವ ಈ ಹೊಸ ಸರ್ಕಾರದ ಭವಿಷ್ಯ, ಅದು ಹೇಗೆ ಸಮತೋಲನ ಕಾಯ್ದುಕೊಳ್ಳುತ್ತದೆ ಎಂಬುದನ್ನು ಆಧರಿಸಿದೆ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.