ADVERTISEMENT

ಹೋಲಿಕೆ ಇರುವ ಚುನಾವಣಾ ಚಿಹ್ನೆ ನೀಡಬೇಡಿ: ಚುನಾವಣಾ ಆಯೋಗಕ್ಕೆ ಎನ್‌ಸಿಪಿ ಮನವಿ

ಪಿಟಿಐ
Published 25 ಜೂನ್ 2024, 13:52 IST
Last Updated 25 ಜೂನ್ 2024, 13:52 IST
<div class="paragraphs"><p>ಪ್ರಾತನಿಧಿಕ ಚಿತ್ರ</p></div>

ಪ್ರಾತನಿಧಿಕ ಚಿತ್ರ

   

ಮುಂಬೈ: ಮುಂಬರಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ‌ತಮ್ಮ ಪಕ್ಷದ ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆಯನ್ನು ಹೋಲುವಂತಹ, ಮತದಾರರ ದಿಕ್ಕುತಪ್ಪಿಸುವಂತಿರುವ ಚಿಹ್ನೆಗಳನ್ನು ಯಾರಿಗೂ ನೀಡಬೇಡಿ ಎಂದು ಎನ್‌ಸಿಪಿ (ಎಸ್‌ಪಿ) ಚುನಾವಣಾ ಆಯೋಗವನ್ನು ಕೋರಿದೆ.

ಕಹಳೆ/ತುತ್ತೂರಿ ರೀತಿಯ ಒಂದೇ ರೀತಿ ಕಾಣುವ ಚಿಹ್ನೆಗಳನ್ನು ಪಕ್ಷೇತರ ಅಭ್ಯರ್ಥಿಗಳಿಗೆ ನೀಡುವುದು ಪಕ್ಷಕ್ಕೆ ಅನನುಕೂಲ ಉಂಟುಮಾಡುವುದಲ್ಲದೇ, ಚುನಾವಣೆಯಲ್ಲಿ ಸಮಾನ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕೆಂಬ ನೀತಿಗೆ ವಿರುದ್ಧವಾಗಿದೆ ಎಂದು ಪಕ್ಷ ಪ್ರತಿಪಾದಿಸಿದೆ.

ADVERTISEMENT

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ‘ಕಹಳೆ’ ಚಿಹ್ನೆಯನ್ನು ಪಕ್ಷೇತರ ಅಭ್ಯರ್ಥಿಗೆ ನೀಡಿದ್ದು ಮತದಾರರಲ್ಲಿ ಗೊಂದಲ ಮೂಡಿಸಿತ್ತು ಮತ್ತು ತಮ್ಮ ಪಕ್ಷಕ್ಕೆ ಕೆಲವು ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಲು ಕಾರಣವಾಗಿತ್ತು ಎಂದು ಪಕ್ಷ ಹೇಳಿದೆ. ಸತಾರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಸಂಜಯ್ ಗಾಡೆ ಅವರಿಗೆ ಚುಣಾವಣಾ ಆಯೋಗವು ‘ಕಹಳೆ’ ಚಿಹ್ನೆಯನ್ನು ನೀಡಿತ್ತು. ಅವರು ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಶಶಿಕಾಂತ್ ಶಿಂದೆ ಅವರನ್ನು 32,771 ಮತಗಳ ಅಂತರದಿಂದ ಸೋಲಿಸಿದ್ದನ್ನು ಪಕ್ಷವು ನಿದರ್ಶನವನ್ನಾಗಿ ನೀಡಿದೆ.

ಲೋಕಸಭಾ ಚುನಾವಣೆಗೆ ಮುಂಚೆ, ಎನ್‌ಸಿಪಿ ಇಬ್ಭಾಗವಾದ ನಂತರ ಚುನಾವಣಾ ಆಯೋಗವು ಎನ್‌ಸಿಪಿ (ಎಸ್‌ಪಿ) ಬಣಕ್ಕೆ ‘ಕಹಳೆ ಊದುವ ಮನುಷ್ಯ’ನ ಚಿಹ್ನೆಯನ್ನು ನೀಡಿತ್ತು. ಮಹಾರಾಷ್ಟ್ರದ ವಿಧಾನಸಭೆಗೆ ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.