ಸಂಬಲ್ಪುರ/ಕಿಯೋಂಝರ್ (ಒಡಿಶಾ) (ಪಿಟಿಐ): ಲೋಕಸಭಾ ಚುನಾವಣೆಯ ಐದು ಹಂತದ ಮತದಾನದ ನಂತರ ಎನ್ಡಿಎ ಕೂಟವು 310 ಸ್ಥಾನಗಳನ್ನು ಗಳಿಸಿದೆ. ಆರು ಮತ್ತು ಏಳನೇ ಹಂತದ ಮತದಾನದ ನಂತರ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪಕ್ಷದ ಅಭ್ಯರ್ಥಿಯಾಗಿರುವ ಸಂಬಲ್ಪುರದಲ್ಲಿ ಚುನಾವಣಾ ರ್ಯಾಲಿ ನಡೆಸಿದ ಅವರು, ‘ಬಾಬು ರಾಜ್’ನಿಂದ ಒಡಿಶಾವನ್ನು ಬಿಡುಗಡೆಗೊಳಿಸಿ, ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಮಂಗಳವಾರ ಒತ್ತಾಯಿಸಿದರು.
‘ಒಡಿಶಾದ ಆಡಳಿತಾರೂಢ ಬಿಜೆಡಿ ಸರ್ಕಾರವು ಜಗನ್ನಾಥ ದೇವಾಲಯವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡಲು ಬಯಸಿದ್ದು, ದೇವಾಲಯದ ನಾಲ್ಕು ಬಾಗಿಲುಗಳನ್ನು ಇನ್ನೂ ಸಾರ್ವಜನಿಕರಿಗೆ ಮುಕ್ತಗೊಳಿಸಿಲ್ಲ. ಪುರಿಯ ಎಲ್ಲ ಮಠ ಹಾಗೂ ದೇವಾಲಯಗಳನ್ನು ನಾಶಪಡಿಸಲಾಗಿದೆ. ಜಗತ್ಪ್ರಸಿದ್ಧ ಜಗನ್ನಾಥ ರಥ ಯಾತ್ರೆಯನ್ನು ನಿಲ್ಲಿಸಲು ಕುತಂತ್ರ ಹೆಣೆಯಲಾಗಿತ್ತು’ ಎಂದು ಆರೋಪಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರವು ಆದಿವಾಸಿಗಳಿಗಾಗಿ ಏನೂ ಮಾಡಿಲ್ಲ ಎಂದು ಆರೋಪಿಸಿದ ಅವರು, ‘ಅಟಲ್ ಬಿಹಾರಿ ವಾಜಪೇಯಿ ಅವರು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪಿಸಿದರೆ, ನರೇಂದ್ರ ಮೋದಿ ಅವರು ಒಡಿಶಾ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಿದರು’ ಎಂದು ಪ್ರತಿಪಾದಿಸಿದರು.
ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯುವ ಪರಿಶ್ರಮದಿಂದ ಕೆಲಸ ಮಾಡುವಂತಹ ಒಡಿಯಾದ ‘ಮಣ್ಣಿನ ಮಗ’ನನ್ನು ಮುಖ್ಯಮಂತ್ರಿಯಾಗಿ ಮಾಡಲಿದೆ.–ಅಮಿತ್ ಶಾ, ಕೇಂದ್ರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.