ADVERTISEMENT

ನೀಟ್‌: ಪಟ್ನಾದಲ್ಲಿ ಆರು ‘ಪೋಸ್ಟ್‌ ಡೇಟೆಡ್‌ ಚೆಕ್‌ಗಳು’ ವಶ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ * ಇಲ್ಲಿಯವರೆಗೆ 13 ಮಂದಿ ಬಂಧನ

ಪಿಟಿಐ
Published 17 ಜೂನ್ 2024, 0:05 IST
Last Updated 17 ಜೂನ್ 2024, 0:05 IST
ನೀಟ್‌
ನೀಟ್‌   

ಪಟ್ನಾ: ಕಳೆದ ತಿಂಗಳು ನಡೆದ ‘ನೀಟ್‌–ಯುಜಿ’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು (ಇಒಯು) ಆರು ‘ಪೋಸ್ಟ್‌ ಡೇಟೆಡ್‌ ಚೆಕ್‌’ಗಳನ್ನು ವಶಪಡಿಸಿಕೊಂಡಿದೆ. ಇದು ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಗಳು ತಲಾ ₹ 30 ಲಕ್ಷವನ್ನು ಮಾಫಿಯಾದವರಿಗೆ ನೀಡಿದ ಚೆಕ್‌ಗಳಾಗಿವೆ.

ಆಕಾಂಕ್ಷಿಗಳಿಗೆ ಪರೀಕ್ಷೆಗೂ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಲು ಮಾಫಿಯಾದವರಿಗೆ ನೀಡಲಾದ ಚೆಕ್‌ಗಳು ಇವಾಗಿವೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಡಿಐಜಿ ಮಾನವಜಿತ್‌ ಸಿಂಗ್‌ ಧಿಲ್ಲೋನ್‌ ತಿಳಿಸಿದ್ದಾರೆ.

ಸಂಬಂಧಪಟ್ಟ ಬ್ಯಾಂಕ್‌ಗಳಿಂದ ಖಾತೆದಾರರ ವಿವರಗಳನ್ನು ತನಿಖಾಧಿಕಾರಿಗಳು ಖಚಿತಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಒಟ್ಟು 13 ಜನರ ಬಂಧನ: ನೀಟ್‌–ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಒಯು ಇಲ್ಲಿಯವರೆಗೆ ನಾಲ್ವರು ಅಭ್ಯರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ಸೇರಿ ಒಟ್ಟು 13 ಜನರನ್ನು ಬಂಧಿಸಿದೆ. ಎಲ್ಲ ಆರೋಪಿಗಳು ಬಿಹಾರದ ಮೂಲದವರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಬಿಹಾರದ ನಾಲ್ವರು ಪರೀಕ್ಷಾರ್ಥಿಗಳು ಸೇರಿದಂತೆ ಒಂಬತ್ತು ಆಕಾಂಕ್ಷಿಗಳು ಪರೀಕ್ಷೆಗೂ ಒಂದು ದಿನ ಮುನ್ನ ಪಟ್ನಾದ ಗೋಪ್ಯ ಸ್ಥಳದಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಪಡೆದಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.

‘ತಮ್ಮ ಪೋಷಕರು ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಒದಗಿಸಲು ತಲಾ ₹ 30 ಲಕ್ಷಕ್ಕೂ ಹೆಚ್ಚು ಹಣವನ್ನು ಪಾವತಿಸಿದ್ದಾರೆ’ ಎಂದು ನೀಟ್‌ ಆಕಾಂಕ್ಷಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಟ್ಟ ಪ್ರಶ್ನೆ ಪತ್ರಿಕೆ ವಶಕ್ಕೆ: ‘ಈ ಕುರಿತು ನಡೆದಿರುವ ಹಣಕಾಸಿನ ವ್ಯವಹಾರದ ಪುರಾವೆಗಳು ಸಹ ಪತ್ತೆಯಾಗಿದ್ದು, ತನಿಖೆ ಸಮಯದಲ್ಲಿ ಆರು ಪೋಸ್ಟ್‌ ಡೇಟೆಡ್‌ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಗೋಪ್ಯ ಸ್ಥಳದಿಂದ ಭಾಗಶಃ ಸುಟ್ಟ ಪ್ರಶ್ನೆ ಪತ್ರಿಕೆಯ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಡಿಐಜಿ ವಿವರಿಸಿದ್ದಾರೆ.

‘ನಾವು ಎನ್‌ಟಿಎಯಿಂದ ಉಲ್ಲೇಖಿತ ಪ್ರಶ್ನೆ ಪತ್ರಿಕೆಗಳನ್ನು ಕೇಳಿದ್ದೇವೆ. ಆದರೆ ಅದು ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ. ಎನ್‌ಟಿಯಿಂದ ಪ್ರಶ್ನೆ ಪತ್ರಿಕೆ ದೊರೆತ ಬಳಿಕ, ಸುಟ್ಟ ಪ್ರಶ್ನೆ ಪತ್ರಿಕೆಯ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ’ ಎಂದು ಅವರು ಹೇಳಿದ್ದಾರೆ. 

ಮೇ 5ರ ನೀಟ್‌–ಯುಜಿ ಪರೀಕ್ಷೆಗೂ ಮುನ್ನ ಸುಮಾರು 35 ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಅವುಗಳ ಉತ್ತರಗಳನ್ನು ಒದಗಿಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಇಒಯು ಮೂಲಗಳು ತಿಳಿಸಿವೆ.

ಪಟ್ನಾದ ರಾಮಕೃಷ್ಣನಗರದ ಬಾಡಿಗೆ ಮನೆಯೊಂದಕ್ಕೆ ಆಕಾಂಕ್ಷಿ ಅಭ್ಯರ್ಥಿಗಳನ್ನು ಕರೆಸಿ, ಅಲ್ಲಿ ಅವರಿಗೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಒದಗಿಸಲಾಗಿದೆ. ಪೊಲೀಸರು ಈ ಬಾಡಿಗೆ ಮನೆಯ ಶೋಧ ನಡೆಸಿದ್ದು, ಅಲ್ಲಿ ಮೊಬೈಲ್‌ ಫೋನ್‌ಗಳು, ಪ್ರವೇಶ ಪತ್ರಗಳು ಮತ್ತು ಇತರ ಪೂರಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.