ADVERTISEMENT

ಐಎಂಎ ಅಧ್ಯಕ್ಷರಿಂದ ಕ್ಷಮೆಯಾಚನೆ

ಪಿಟಿಐ
Published 4 ಜುಲೈ 2024, 16:13 IST
Last Updated 4 ಜುಲೈ 2024, 16:13 IST
   

ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಕ್ಷಿದಾರರಾಗಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿದ ಹೇಳಿಕೆಯನ್ನು ವಿರೋಧಿಸಿದ್ದಕ್ಕೆ ಐಎಂಎ ಅಧ್ಯಕ್ಷ ಡಾ. ಆರ್‌.ವಿ. ಅಶೋಕನ್‌ ಅವರು ಸಾರ್ವಜನಿಕವಾಗಿ ಗುರುವಾರ ಕ್ಷಮೆಯಾಚಿಸಿದ್ದಾರೆ.

‘ನಾನು ನೀಡಿದ್ದ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ ಬೇಷರತ್‌ ಕ್ಷಮಾಪಣೆ ಕೋರಿ ನ್ಯಾಯಾಲಯಕ್ಕೆ ಅಫಿಡವಿಟ್‌ ಅನ್ನೂ ಸಲ್ಲಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ನ ಘನತೆಯನ್ನು ಕಡಿಮೆ ಮಾಡುವ ಯಾವುದೇ ಉದ್ದೇಶವನ್ನು ನಾನು ಹೊಂದಿಲ್ಲ’ ಎಂದು ಅವರು ಕ್ಷಮೆಯಾಚನೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಐಎಂಎ ಸದಸ್ಯರ ಕಡೆಯಿಂದಲೂ ತಪ್ಪುಗಳಾಗುತ್ತಿವೆ. ಅವರು ಅನೈತಿಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಹಲವು ದೂರುಗಳಿವೆ. ಅವರು ರೋಗಿಗಳ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು, ದುಬಾರಿ ಔಷಧಿಗಳನ್ನು ಶಿಫಾರಸು ಮಾಡುವುದಲ್ಲದೆ, ಅನಗತ್ಯ ಪರೀಕ್ಷೆಗಳನ್ನು ಮಾಡಿಸುವಂತೆ ಶಿಫಾರಸು ಮಾಡುತ್ತಾರೆ’ ಎಂದು ಪೀಠ ವಿಚಾರಣೆ ವೇಳೆ ಹೇಳಿತ್ತು.

‘ಐಎಂಎ ಹಾಗೂ ಖಾಸಗಿ ವೈದ್ಯರ ನಡೆಗಳನ್ನು ಸುಪ್ರೀಂ ಕೋರ್ಟ್‌ ಟೀಕೆ ಮಾಡಿರುವುದು ದುರದೃಷ್ಟಕರ’ ಎಂದೂ ಅಶೋಕನ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.