ADVERTISEMENT

ದೆಹಲಿಗೆ ನೂತನ ಮುಖ್ಯಮಂತ್ರಿ: ಯಾರು ಈ ಅತಿಶಿ ಮರ್ಲೆನಾ ಸಿಂಗ್‌?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಸೆಪ್ಟೆಂಬರ್ 2024, 11:16 IST
Last Updated 17 ಸೆಪ್ಟೆಂಬರ್ 2024, 11:16 IST
<div class="paragraphs"><p>ಅತಿಶಿ ಮರ್ಲೆನಾ ಸಿಂಗ್</p></div>

ಅತಿಶಿ ಮರ್ಲೆನಾ ಸಿಂಗ್

   

ಪಿಟಿಐ ಚಿತ್ರ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಘೋಷಣೆ ನಂತರ ಮುಂದಿನ ಸಿಎಂ ಯಾರು ಎಂಬ ಚರ್ಚೆಗಳು ನಡೆದಿದ್ದವು. ಈ ಹಗರಣದ ಸುದ್ದಿಯುದ್ದಕ್ಕೂ ಎಎಪಿಗೆ ರಕ್ಷಣಾ ಕೋಟೆಯಂತೆ ನಿಂತಿದ್ದ ಅತಿಶಿ ಮರ್ಲೆನಾ ಸಿಂಗ್ ಅವರನ್ನು ಶಾಸಕಾಂಗ ಪಕ್ಷದ ನಿರ್ಧಾರದ ನಂತರ ಈ ಚರ್ಚೆಗೆ ತೆರೆ ಬಿದ್ದಿದೆ. 

ADVERTISEMENT

ನರ್ಮದಾ ನೀರಿಗಾಗಿ ಉಪವಾಸ ನಡೆಸುವ ಮೂಲಕ ಗಮನ ಸೆಳೆದಿದ್ದ ಅತಿಶಿ, ಎಎಪಿ ಹಾಗೂ ಕೇಜ್ರಿವಾಲ್‌ಗೆ ಅಪಾಯ ಎದುರಾದಾಗಲೆಲ್ಲಾ ಅವರಿಗೆ ಬೆಂಬಲವಾಗಿ ನಿಂತು ವಿರೋಧಿಗಳ ದಾಳಿಗೆ ದಿಟ್ಟ ಉತ್ತರ ನೀಡಿದವರು. ಇದೀಗ ಇವರ ಹೆಸರನ್ನೇ ಹಾಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಅವರ ಆಯ್ಕೆಗೆ ಶಾಸಕರು ಧನಿಗೂಡಿಸಿ ಬೆಂಬಲಿಸಿದ್ದಾರೆ.

ಯಾರು ಈ ಅತಿಶಿ ಮರ್ಲೆನಾ?

ಅತಿಶಿ ಅವರು 1981ರ ಜೂನ್ 8ರಂದು ದೆಹಲಿಯ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದವರು. ತಾಯಿ ತೃಪ್ತಾ ವಾಹಿ ಹಾಗೂ ತಂದೆ ವಿಜಯ್ ಸಿಂಗ್‌ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಅತಿಶಿ ಅವರು ಪ್ರವೀಣ್ ಸಿಂಗ್ ಅವರನ್ನು ವರಿಸಿದ್ದಾರೆ. ಅವರೂ ಶಿಕ್ಷಣ ತಜ್ಞ ಹಾಗೂ ಸಂಶೋಧಕ. ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಲವು ವರ್ಷಗಳಿಂದ ಈ ಜೋಡಿ ಜತೆಗೂಡಿ ಕೆಲಸ ಮಾಡಿದೆ.

ತಾವು ನಂಬಿಕೊಂಡು ಬಂದ ಸಿದ್ಧಾಂತದಿಂದಾಗಿ ಅತಿಶಿ ಅವರು ತಮ್ಮ ಮಧ್ಯದ ಹೆಸರನ್ನು ‘ಮರ್ಲೆನಾ’ ಎಂದು ಇಟ್ಟುಕೊಂಡಿದ್ದಾರೆ. ಇದು ಮಾರ್ಕ್ಸ್‌ ಹಾಗೂ ಲೆನಿನ್‌ ಹೆಸರುಗಳನ್ನು ಸೂಚಿಸುತ್ತದೆ. ತಮ್ಮ ಕೌಟುಂಬಿಕ ಹಿನ್ನೆಲೆಯಿಂದ ರಾಜಕೀಯಕ್ಕೆ ಧುಮುಕುವ ನಿರ್ಧಾರ ಮಾಡಿದ ನಂತರ ಸಾರ್ವಜನಿಕ ವಲಯದಲ್ಲಿ ಅವರು ‘ಅತಿಶಿ‘ ಎಂದೇ ಗುರುತಿಸಿಕೊಂಡಿದ್ದಾರೆ.

ಅತಿಶಿ ಅವರ ಶಾಲಾ ಶಿಕ್ಷಣ ದೆಹಲಿಯಲ್ಲೇ ನಡೆದಿದೆ. ಪುಸಾ ರಸ್ತೆಯ ಸ್ಪ್ರಿಂಗ್ ಡೇಲ್ಸ್‌ ಶಾಲೆಯಲ್ಲಿ ಪ್ರೌಢ ಶಿಕ್ಷಣ. ಪದವಿಯನ್ನು ಸೇಂಟ್‌ ಸ್ಟೀಫನ್ಸ್ ಕಾಲೇಜಿನಲ್ಲಿ 2001ರಲ್ಲಿ ಪೂರ್ಣಗೊಳಿಸಿದರು. ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದಕ್ಕಾಗಿ ಅವರು ಎರಡು ಶಿಷ್ಯವೇತನವನ್ನೂ ಪಡೆದಿದ್ದಾರೆ. 

2013ರ ಜನವರಿಯಲ್ಲಿ ಅತಿಶಿ ಅವರು ಆಮ್‌ ಆದ್ಮಿ ಪಕ್ಷ ಸೇರಿದರು. ಎಎಪಿಯ ನೀತಿ ನಿರೂಪಣೆಯಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡ ಅವರು, ಅಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ನೀತಿ ರೂಪಿಸುವಲ್ಲಿ ಧಾರೆ ಎರೆದಿದ್ದಾರೆ.

2015ರಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದ ಜಲ ಸತ್ಯಾಗ್ರಹದಲ್ಲಿ ಎಎಪಿ ಮುಖಂಡ ಅಲೋಕ್ ಅಗರವಾಲ್‌ ಬೆನ್ನಿಗೆ ನಿಂತ ಅತಿಶಿ ಹೆಚ್ಚು ಸುದ್ದಿಯಾದರು. ಜತೆಗೆ ಕಾನೂನು ಸಂಘರ್ಷವನ್ಣೂ ಎದುರಿಸಿದರು.

ಅತಿಶಿ ಮತ್ತು ದೆಹಲಿ ರಾಜಕೀಯ

2019ರ ಲೋಕಸಭಾ ಚುನಾವಣೆಯಲ್ಲಿ ಅತಿಶಿ ಅವರನ್ನು ಪೂರ್ವ ದೆಹಲಿಯ ಉಸ್ತುವಾರಿಯನ್ನಾಗಿ ಎಎಪಿ ನೇಮಿಸಿತು. ಚುನಾವಣೆಯನ್ನು ಎದುರಿಸಿದರೂ ಅಲ್ಲಿ ಪಕ್ಷಕ್ಕೆ ಸೋಲಾಯಿತು. ಗೌತಮ್ ಗಂಭೀರ್ ಅವರು 4.77 ಲಕ್ಷ ಮತಗಳಿಂದ ಜಯಗಳಿಸಿದರು. ಆದರೆ 2020ರ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆ ಅತಿಶಿ ಪಾಲಿಗೆ ದೊಡ್ಡ ತಿರುವನ್ನು ನೀಡಿತು. ದಕ್ಷಿಣ ದೆಹಲಿಯ ಕಲ್ಕಜಿಯಿಂದ ಅವರು ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿ ಧರಮ್‌ಬೀರ್‌ ಸಿಂಗ್ ಅವರನ್ನು 11 ಸಾವಿರ ಮತಗಳಿಂದ ಪರಾಭಗೊಳಿಸಿದರು. ಇದರ ಜತೆಯಲ್ಲೇ ತಮ್ಮ ಕಾರ್ಯಗಳ ಮೂಲಕವೂ, ಅತಿಶಿ ದೆಹಲಿ ಸರ್ಕಾರದ ಪ್ರಮುಖ ಭಾಗವಾದರು.

ಈ ಗೆಲುವು ಅತಿಶಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನು ಗಿಟ್ಟಿಸಿಕೊಟ್ಟಿತು. ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ರಾಜೀನಾಮೆಯಿಂದಾಗಿ ಅತಿಶಿ ಸರ್ಕಾರ ಹಾಗೂ ಪಕ್ಷ ಎರಡನ್ನೂ ನಿಭಾಯಿಸುವ ಜವಾಬ್ದಾರಿ ಹೊತ್ತುಕೊಂಡರು. 2022–23ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷೆಯಾಗಿದ್ದರು. ಇದರೊಂದಿಗೆ ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ಇನ್ನೂ ಹಲವು ಸಮಿತಿಗಳ ಉಸ್ತುವಾರಿ ಅತಿಶಿ ಹೆಗಲಿಗೆ ಬಿದ್ದಿತು. 

ಇವೆಲ್ಲವನ್ನೂ ನಿಭಾಯಿಸಿದ ಅತಿಶಿ, ಅರವಿಂದ ಕೇಜ್ರಿವಾಲ್ ಸಹಿತ ಎಎಪಿ ಶಾಸಕರ ವಿಶ್ವಾಸ ಗೆದ್ದರು. ಇದು ಈಗ ಅವರಿಗೆ ಮುಖ್ಯಮಂತ್ರಿ ಸ್ಥಾನದ ಮಾರ್ಗವನ್ನು ಸುಗಮಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.