ಹೈದರಾಬಾದ್: ಮಾವೋವಾದಿಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಮೇರೆಗೆ ಹಿರಿಯ ಪತ್ರಕರ್ತ ಎನ್. ವೇಣುಗೋಪಾಲ್ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ರವಿ ಶರ್ಮಾ ಅವರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ತಂಡಗಳು ಗುರುವಾರ ದಾಳಿ ನಡೆಸಿವೆ.
ವೇಣುಗೋಪಾಲ್ ಅವರು ‘ವೀಕ್ಷಣಂ’ ಎಂಬ ಭಾಷಾ ಪತ್ರಿಕೆಯನ್ನು ನಡೆಸುತ್ತಿದ್ದು, ಕೆಲ ಪುಸ್ತಕಗಳನ್ನೂ ಬರೆದಿದ್ದಾರೆ. ಅವರು ಕವಿ ವರವರ ರಾವ್ ಅವರ ಸಂಬಂಧಿ. ವರವರ ರಾವ್ ಅವರು ಭೀಮಾ–ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ.
ಮುಂಜಾನೆ 5 ಗಂಟೆಗೆ ಆರಂಭವಾದ ದಾಳಿಗಳು ಬೆಳಿಗ್ಗೆ 11 ಗಂಟೆಯವರೆಗೂ ನಡೆಯಿತು. ನಿಷೇಧಿತ ಮಾವೋವಾದಿ ಸಂಘಟನೆಯ ಮುಖಂಡ ಸಂಜೋಯ್ ದೀಪಕ್ ರಾವ್ ಜತೆಗೆ ವೇಣುಗೋಪಾಲ್ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆ ಮೇರೆಗೆ ಈ ದಾಳಿ ನಡೆದಿದೆ.
ಸೈಬರಾಬಾದ್ ಪೊಲೀಸರು ದೀಪಕ್ ರಾವ್ ಅನ್ನು ಸೆಪ್ಟೆಂಬರ್ನಲ್ಲಿ ಬಂಧಿಸಿದ್ದರು. ಆರೋಪಿ ವಿರುದ್ಧ ತೆಲಂಗಾಣ ಸಾರ್ವಜನಿಕ ಭದ್ರತಾ ಕಾಯ್ದೆ, ಯುಎಪಿಎ, ಶಸ್ತ್ರಾಸ್ತ್ರ ಕಾಯ್ದೆಗಳ ವಿವಿಧ ಕಲಂಗಳಡಿ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ವೇಣುಗೋಪಾಲ್ ಅವರನ್ನು 22ನೇ ಆರೋಪಿಯನ್ನಾಗಿಸಲಾಗಿದೆ. ಈ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡಿದ್ದು, ತನಿಖೆ ತೀವ್ರಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.