ADVERTISEMENT

ಭೂಕುಸಿತ ಕಂಡ ವಯನಾಡ್‌ ಗ್ರಾಮಗಳಲ್ಲಿ ಕಾಣದ ಓಣಂ ಸಂಭ್ರಮ

ಪಿಟಿಐ
Published 15 ಸೆಪ್ಟೆಂಬರ್ 2024, 13:09 IST
Last Updated 15 ಸೆಪ್ಟೆಂಬರ್ 2024, 13:09 IST
ಭೂಕುಸಿತದ ನಂತರ ವಯನಾಡ್‌ನ ಚೂರಲ್‌ಮಲ ಗ್ರಾಮ
ಭೂಕುಸಿತದ ನಂತರ ವಯನಾಡ್‌ನ ಚೂರಲ್‌ಮಲ ಗ್ರಾಮ   

ವಯನಾಡ್ (ಕೇರಳ): ಭೀಕರ ಭೂಕುಸಿತ ಕಂಡ ವಯನಾಡ್ ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳಲ್ಲಿ ಭಾನುವಾರ ‘ತಿರುಓಣಂ’ ಹಬ್ಬದ ಯಾವುದೇ ಸಂಭ್ರಮ ಇರಲಿಲ್ಲ. ‘ಪೂಕಳಂ’ (ಹೂವಿನ ಚಿತ್ತಾರ), 'ಊಂಜಲ್‌’ (ಉಯ್ಯಾಲೆ) ಅಥವಾ ಯಾವುದೇ ಇತರೆ ಆಚರಣೆಗಳೂ ಕಂಡುಬರಲಿಲ್ಲ. 

ವಯನಾಡ್ ಜಿಲ್ಲೆಯ ಕುಗ್ರಾಮಗಳಲ್ಲಿ ಕಳೆದ ವರ್ಷ ಜಾತಿ ಹಾಗೂ ಧಾರ್ಮಿಕ ಅಡೆತಡೆಗಳನ್ನೂ ಮೀರಿ ಜನರು ಸಂಭ್ರಮದಿಂದ ಪೂಕಳಂ ಬಿಡಿಸಿ, ಸಾಂಪ್ರದಾಯಿಕ ಆಟಗಳನ್ನು ಆಡಿದ್ದರು. ಗ್ರಾಮಗಳ ದೇವಸ್ಥಾನ ಮತ್ತು ಶಾಲಾ ಮೈದಾನಗಳಲ್ಲಿ ಹಬ್ಬದ ಆಚರಣೆಗಳನ್ನು ಕೈಗೊಂಡಿದ್ದರು. 

ಮುಂಡಕ್ಕೈ ಮತ್ತು ಚೂರಲ್‌ಮಲ ಸ್ಥಳೀಯರು ಇದೀಗ ಮನೆ ಕಳೆದುಕೊಂಡು ಬಾಡಿಗೆ ಅಥವಾ ಹತ್ತಿರದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಹಬ್ಬದ ಯಾವುದೇ ಸಂಭ್ರಮವಿಲ್ಲ.

ADVERTISEMENT

ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದ ಕಾರಣಕ್ಕೆ ಯಾವುದೇ ಓಣಂ ಅಧಿಕೃತ ಆಚರಣೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿತ್ತು. ಶನಿವಾರ ತಮ್ಮ ಓಣಂ ಸಂದೇಶ ನೀಡಿದ್ದ ಕೇರಳ ಮುಖ್ಯಮಂತ್ರಿ, ‘ರಾಜ್ಯ ಸರ್ಕಾರ ಈಗ ಮನೆಗಳ ಪುನರ್‌ನಿರ್ಮಾಣ ಮಾಡುವ, ಜನಜೀವನವನ್ನು ಸಹಜ ಸ್ಥಿತಿಗೆ ತರುವ ಪ್ರಮುಖ ಕಾರ್ಯದಲ್ಲಿ ನಿರತವಾಗಿದೆ. ಆ ಮೂಲಕ ಭೂಕುಸಿತದ ಪ್ರದೇಶಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾಶೀಲವಾಗಿಸುವ ಕೆಲಸದಲ್ಲಿದೆ. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಜನರು ಕೊಡುಗೆ ನೀಡುವ ಮೂಲಕ ಭೂಕುಸಿದ ಪ್ರದೇಶಗಳ ಪುನರ್‌ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.