ನವದೆಹಲಿ: ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಪ್ರಸ್ತುತ ವಾರ್ಷಿಕ ₹6000 ಆರ್ಥಿಕ ನೆರವನ್ನು ನೀಡುತ್ತಿದ್ದು, ಅದನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಪಿಎಂ ಕಿಸಾನ್ ಯೋಜನೆಯ ಆರ್ಥಿಕ ನೆರವನ್ನು ವಾರ್ಷಿಕ ₹6000ದಿಂದ ₹8000–12,000ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆಯೇ ಎನ್ನುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅರ್ಜುನ್ ಮುಂಡಾ, ‘ಅಂತಹ ಯಾವುದೇ ಪ್ರಸ್ತಾವ ಪರಿಗಣನೆಯಲ್ಲಿ ಇಲ್ಲ. ಮಹಿಳಾ ರೈತರಿಗೆ ಕೂಡ ಆರ್ಥಿಕ ನೆರವನ್ನು ಹೆಚ್ಚಿಸುವ ಚಿಂತನೆ ಇಲ್ಲ‘ ಎಂದು ತಿಳಿಸಿದ್ದಾರೆ.
2019ರಲ್ಲಿ ಆರಂಭವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಅರ್ಹ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕವಾಗಿ ₹6000 ಅನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆಯ ಮೂಲಕ ತಲುಪಿಸಲಾಗುತ್ತದೆ.
ಯೋಜನೆಯ ಪ್ರಗತಿಯ ಬಗ್ಗೆ ವಿವರಿಸಿದ ಸಚಿವರು, ‘ಸರ್ಕಾರವು ಇದುವರೆಗೆ 15 ಕಂತುಗಳಲ್ಲಿ 11 ಕೋಟಿ ರೈತರಿಗೆ ₹2.81 ಲಕ್ಷ ಕೋಟಿಯನ್ನು ವಿತರಿಸಿದೆ. ಇದು ಜಗತ್ತಿನ ಅತಿ ದೊಡ್ಡ ನೇರ ವರ್ಗಾವಣೆಯ ಯೋಜನೆಯಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.