ADVERTISEMENT

ಕೆನೆಪದರಕ್ಕೆ ಬಡ್ತಿ ಮೀಸಲು ಇಲ್ಲ

2006ರ ತೀರ್ಪಿಗೆ ಮನ್ನಣೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 19:32 IST
Last Updated 26 ಸೆಪ್ಟೆಂಬರ್ 2018, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಮುಂದುವರೆಯಲಿದೆ. ಆದರೆ ಅವರಲ್ಲಿಯೇ ಮುಂದುವರೆದವರು- ಸಬಲರನ್ನು ಒಳಗೊಂಡ 'ಕೆನೆಪದರ'ಕ್ಕೆ ಈ ಅವಕಾಶ ಇನ್ನು ಮುಂದೆ ಲಭ್ಯವಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಅವರ ಪೈಕಿ ಮುಂದುವರೆದವರನ್ನು ಹೊರಗಿಡುವ 'ಕೆನೆಪದರ ತತ್ವ'ವನ್ನು ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ತರ ತೀರ್ಪು ನೀಡಿತು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅತಿ ಹಿಂದುಳಿದ ವರ್ಗಗಳು. ಈ ವರ್ಗಗಳ 'ಕೆನೆಪದರ'ಕ್ಕೆ ನೀಡಲಾಗುವ ಯಾವುದೇ ಮೀಸಲಾತಿಯನ್ನು ರದ್ದು ಮಾಡುವ ಅಧಿಕಾರ ಸಂವಿಧಾನಿಕ ನ್ಯಾಯಾಲಯಕ್ಕೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ.

ADVERTISEMENT

ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್, ಸಂಜಯ ಕಿಶನ್ ಕೌಲ್ ಹಾಗೂ ಇಂದು ಮಲ್ಹೋತ್ರ ಅವರನ್ನು ಈ ನ್ಯಾಯಪೀಠ ಒಳಗೊಂಡಿತ್ತು. ಪೀಠದ ಪರವಾಗಿ ನಾರಿಮನ್ ತೀರ್ಪನ್ನು ಬರೆದಿದ್ದಾರೆ.

ಬಡ್ತಿಯಲ್ಲಿ ಮೀಸಲಾತಿ ಪ್ರಶ್ನಿಸಿ ಎಂ.ನಾಗರಾಜ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೆನೆಪದರವನ್ನು ಅನ್ವಯಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ 2006ರಲ್ಲಿ ನೀಡಿದ್ದ ತೀರ್ಪಿನ ಹಲವು ಅಂಶಗಳನ್ನು ಇಂದಿನ ತೀರ್ಪು ಎತ್ತಿ ಹಿಡಿಯಿತು. ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಪ್ರಾತಿನಿಧ್ಯದ ಕೊರತೆ ಮತ್ತು ಒಟ್ಟಾರೆ ಆಡಳಿತಾತ್ಮಕ ದಕ್ಷತೆಯನ್ನು ಪರಿಗಣಿಸಬೇಕೆಂಬ ಅಂಶಗಳಿಗೆ ತನ್ನ ಸಮ್ಮತಿ ಮುದ್ರೆ ಒತ್ತಿತು. ಆದರೆ 2006ರ ಈ ತೀರ್ಪನ್ನು ಏಳು ಮಂದಿ ಸದಸ್ಯರ ನ್ಯಾಯಪೀಠದ ಮರುಪರಿಶೀಲನೆಗೆ ಒಪ್ಪಿಸಬೇಕು ಎಂಬ ಅಹವಾಲನ್ನು ತಳ್ಳಿ ಹಾಕಿತು. ಬಡ್ತಿ ಮೀಸಲಾತಿಯ ಹುದ್ದೆಗಳ ಪ್ರಮಾಣವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂಬ ಕೇಂದ್ರ ಸರ್ಕಾರದ ವಾದವನ್ನೂ ನ್ಯಾಯಪೀಠ ತಿರಸ್ಕರಿಸಿತು.

ಪರಿಶಿಷ್ಟರ ಬಡ್ತಿಗೆ ಕೆನೆಪದರ ತತ್ವವನ್ನು ಅನ್ವಯಿಸಬೇಕು ಎಂಬ 2006ರ ತೀರ್ಪಿನ ಅಂಶವನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು, ಪರಿ
ಶಿಷ್ಟರ ಹಿಂದುಳಿದಿರುವಿಕೆ ಗುರುತಿಸಲು ಈ ತತ್ವವನ್ನು ಅನ್ವಯಿಸುವುದು ಸರಿಯಲ್ಲ ಎಂದಿತು. ಹಿಂದುಳಿದಿರುವಿಕೆಯನ್ನು ತೀರ್ಮಾನಿಸಲು ನಿರ್ದಿಷ್ಟ ಅಂಕಿ ಅಂಶವನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸುವ ಅಗತ್ಯ ಇಲ್ಲ ಎಂದು ಸಾರಿತು. ಪ್ರಾತಿನಿಧ್ಯದ ಕೊರತೆಯ ಕುರಿತು 2006ರ ತೀರ್ಪು ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ರಾಜ್ಯ ಸರ್ಕಾರಗಳು ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಈ ಅಂಕಿ ಅಂಶಗಳನ್ನು ನ್ಯಾಯಾಲಯಗಳು ಪರಿಶೀಲಿಸಲಿವೆ ಎಂದು ನಿರ್ದೇಶನ ನೀಡಿತು.

ಸಂವಿಧಾನದ 341 ಮತ್ತು 342 ಕಲಮುಗಳ ಅಡಿಯಲ್ಲಿನ ಪರಿಶಿಷ್ಟ ಜಾತಿ ಪಂಗಡಗಳ ಪಟ್ಟಿಗೆ ಯಾವುದೇ ಜಾತಿಯನ್ನು ಸಮುದಾಯವನ್ನು ಸಂಸತ್ತು ಸೇರಿಸಬಹುದು. ಆದರೆ ಅದೇ ಜಾತಿ, ಗುಂಪು, ಉಪ ಗುಂಪಿನೊಳಗೆ ಸಮಾನತೆಯ ತತ್ವವನ್ನು ಒರೆಗಲ್ಲಿಗೆ ಹಚ್ಚುವ ಮೂಲಕ 'ಕೆನೆಪದರ' ತತ್ವ ಅನ್ವಯಿಸುವ ಅಧಿಕಾರ ನ್ಯಾಯಾಲಯಕ್ಕೆ ಉಂಟು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಹಿಂದುಳಿದ ವರ್ಗಗಳ ನಾಗರಿಕರು ಮುಂದುವರೆದು ಇತರೆ ಭಾರತೀಯ ನಾಗರಿಕರ ಜೊತೆ ಸಮಾನತೆಯ ಆಧಾರದಲ್ಲಿ ಕೈ ಕೈ ಹಿಡಿದು ನಡೆಯುವ ಸ್ಥಿತಿಯನ್ನು ಸೃಷ್ಟಿಸುವುದೇ ಮೀಸಲಾತಿಯ ಮೂಲ ಉದ್ದೇಶ. ಆದರೆ ಅದೇ ವರ್ಗದಲ್ಲಿನ ಕೆನೆಪದರವು ಸರ್ಕಾರಿ ಕ್ಷೇತ್ರದ ಎಲ್ಲ ಉದ್ಯೋಗಗಳನ್ನು ಬಾಚಿಕೊಂಡು ತಮ್ಮದೇ ಸಮುದಾಯಗಳ ಇತರರನ್ನು ಹಿಂದೆಯೇ ಉಳಿಸುವ ಪ್ರವೃತ್ತಿ ಕಾಯಂ ಆಗಿ ಮುಂದುವರೆದರೆ ಮೀಸಲಾತಿಯ ಮೂಲ ಉದ್ದೇಶ ಈಡೇರುವುದಿಲ್ಲ. ಕೆನೆಪದರವನ್ನು ಗುರುತಿಸಿ ಹೊರಗಿಡದಿದ್ದರೆ ಅದೇ ಜಾತಿ- ವರ್ಗದೊಳಗಿನ ಅಸಮಾನರನ್ನು ಸಮಾನವಾಗಿ ನೋಡಿದಂತೆ ಆಗುತ್ತದೆ.

ಕೆನೆಪದರ ತತ್ವವನ್ನು ಅನ್ವಯಿಸಿದರೆ ಪರಿಶಿಷ್ಟ ಜಾತಿ- ಪಂಗಡಗಳ ಪಟ್ಟಿಯಲ್ಲಿ ನ್ಯಾಯಾಲಯ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುವುದಿಲ್ಲ. ಈ ಪಟ್ಟಿ ಹಿಂದಿನಂತೆಯೇ ಮುಂದುವರೆಯಲಿದೆ. ಆದರೆ ಕೆನೆಪದರಕ್ಕೆ ಸೇರುವ ಮೂಲಕ ಅಸ್ಪೃಶ್ಯತೆ ಅಥವಾ ಹಿಂದುಳಿದಿರುವಿಕೆಯಿಂದ ಹೊರಬಂದ ನಿರ್ದಿಷ್ಟ ಗುಂಪು ಅಥವಾ ಉಪಗುಂಪಿನ ವ್ಯಕ್ತಿಗಳನ್ನು ಮೀಸಲಾತಿಯಿಂದ ಹೊರಗಿಡ
ಲಾಗುತ್ತದೆ ಅಷ್ಟೇ. ಅವರು ಪರಿಶಿಷ್ಟ ಜಾತಿಗಳು ಪಂಗಡಗಳ ಪಟ್ಟಿಯಲ್ಲೇ ಮುಂದುವರೆಯುತ್ತಾರೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಡಗಳಿಗೆ ಕೆನೆಪದರ ತತ್ವ ಅನ್ವಯ ಆಗುವುದಿಲ್ಲ ಎಂಬ ಕೇಂದ್ರದ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಜಾತಿಗಳು- ಸಮುದಾಯಗಳನ್ನು ಸೇರಿಸಲು ಸಂಸತ್ತಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಈ ಜಾತಿಗಳು ಮತ್ತು ಸಮುದಾಯಗಳ ಕೆನೆಪದರವನ್ನು ಮೀಸಲಾತಿಯಿಂದ ನ್ಯಾಯಾಲಯ ಹೊರಗೆ ಇರಿಸುವುದು ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಸೇರಿದ್ದು ಎಂದು ತೀರ್ಪು ಸಾರಿದೆ.

*
ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಪಾಲನೆ ಮಾಡಲಾಗುವುದು.
–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.