ಮುಜಫರ್ಪುರ (ಬಿಹಾರ) (ಪಿಟಿಐ): ಬ್ರಿಟನ್ನ ಮಾಜಿ ಪ್ರಧಾನಿ, ಭಾರತ ಮೂಲದ ರಿಷಿ ಸುನಕ್ ಅವರ ಸೋಲು ಭಾರತದ ಜನರಿಗೆ ಬೇಸರ ತರಿಸಿರಬಹುದು. ಆದರೆ, ಮುಜಫರ್ಪುರದ ಜನತೆ ಮಾತ್ರ ಇಲ್ಲಿನ ಮಣ್ಣಿನ ಮಗ ಕನಿಷ್ಕ ನಾರಾಯಣ್ ಅವರ ಯಶಸ್ಸಿಗೆ ಸಂಭ್ರಮಿಸುತ್ತಿದ್ದಾರೆ.
33 ವರ್ಷದ ಕನಿಷ್ಕ ಅವರು ಲೇಬರ್ ಪಕ್ಷದಿಂದ ‘ವೇಲ್ ಆಫ್ ಗ್ಲಮೋರ್ಗನ್’ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಕೃಷ್ಣ ಕಾನೂನು ಕಾಲೇಜಿನ ನಿರ್ದೇಶಕ ಜಯಂತ್ ಕುಮಾರ್ ಅವರು ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಕನಿಷ್ಕ ಅವರು ಜಯಂತ್ ಅವರ ಸಹೋದರನ ಮಗ. ‘ನಮ್ಮ ತಂದೆ ಕೃಷ್ಣ ಕುಮಾರ್ ಅವರು ಕೃಷ್ಣ ಕಾನೂನು ಕಾಲೇಜನ್ನು ಸ್ಥಾಪಿಸಿದವರು. ನಮ್ಮ ರಕ್ತದಲ್ಲಿಯೇ ವಕೀಲಿಕೆ ಇದೆ. ನಾವು ವೈಶಾಲಿ ಜಿಲ್ಲೆಯ ಮೂಲದವರು’ ಎನ್ನುತ್ತಾರೆ ಜಯಂತ್.
‘ಕನಿಷ್ಕ ಅವರು ಇಲ್ಲಿಯೇ ಜನಿಸಿದವರು. ಅವರು ಸಣ್ಣ ಹುಡುಗನಿದ್ದಾಗ ನಾವೆಲ್ಲ ಅವರನ್ನು ನೋಡಿದ್ದೇವೆ’ ಎನ್ನುತ್ತಾರೆ ಇಲ್ಲಿನ ಸುತ್ತಮುತ್ತಲಿನ ಜನ. ‘ಮೂರನೇ ತರಗತಿವರೆಗೂ ಅವರು ಇಲ್ಲಿಯೇ ಕಲಿತಿದ್ದರು. ನಂತರ, ಪೋಷಕರು ದೆಹಲಿಗೆ ಸ್ಥಳಾಂತರಗೊಂಡರು. ಕನಿಷ್ಕ ಅವರಿಗೆ 12 ವರ್ಷ ಇರುವಾಗ ಅವರು ಕಾರ್ಡಿಫ್ ನಗರಕ್ಕೆ ತೆರಳಿದರು’ ಎಂದು ಜಯಂತ್ ಅವರು ಮಾಹಿತಿ ನೀಡಿದರು. ಕನಿಷ್ಕ ಅವರ ಪೋಷಕರು ಬ್ರಿಟನ್ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.