ADVERTISEMENT

ಮಣಿಪುರ ಮಾಜಿ ಮುಖ್ಯಮಂತ್ರಿ ನಿವಾಸದ ಬಳಿ ಬಾಂಬ್‌ ದಾಳಿ: ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 14:55 IST
Last Updated 6 ಸೆಪ್ಟೆಂಬರ್ 2024, 14:55 IST
ಬಾಂಬ್‌ ದಾಳಿಗಳನ್ನು ಖಂಡಿಸಿ, ವಿದ್ಯಾರ್ಥಿನಿಯರು ಇಂಫಾಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಶು‌ಕ್ರವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ಬಾಂಬ್‌ ದಾಳಿಗಳನ್ನು ಖಂಡಿಸಿ, ವಿದ್ಯಾರ್ಥಿನಿಯರು ಇಂಫಾಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಶು‌ಕ್ರವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ಇಂಫಾಲ: ಮಾಜಿ ಮುಖ್ಯಮಂತ್ರಿ ಎಂ. ಕೊಯಿರೆಂಗ್‌ ಅವರ ನಿವಾಸದ ಕಾಂಪೌಂಡ್‌ ಒಳಗೆ ಬಾಂಬ್‌ ದಾಳಿ ನಡೆದಿದೆ. ಶುಕ್ರವಾರ ಒಂದೇ ದಿನದಲ್ಲಿ ಮಣಿಪುರದಲ್ಲಿ ಎರಡು ಸ್ಥಳಗಳಲ್ಲಿ ಈ ರೀತಿಯ  ದಾಳಿಗಳು ನಡೆದಿವೆ.

ಮೈತೇಯಿ ಸಮುದಾಯದವರು ಹೆಚ್ಚಿರುವ ವಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ ಪ್ರದೇಶದಲ್ಲಿ ಕೊಯಿರೆಂಗ್‌ ಅವರ ಮನೆ ಇದೆ. ಇವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಬಂದಿದ್ದ 70 ವರ್ಷದ ವೃದ್ಧರೊಬ್ಬರ ಮೇಲೆ ಬಾಂಬ್‌ ಸಿಡಿದಿದ್ದು, ಅವರು ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ 13 ವರ್ಷ ಬಾಲಕಿಯೂ ಸೇರಿ ಐವರಿಗೆ ಗಾಯಗಳಾಗಿವೆ.

ಈ ದಾಳಿಯನ್ನು ಕುಕಿ ಬುಡಕಟ್ಟು ಸಮುದಾಯದ ಭಯೋತ್ಪಾದಕರೇ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊರ್‍ಯಾಂಗ್‌ ಅವರ ನಿವಾಸ ಮೇಲೆ ಅತ್ಯಾಧುನಿಕ ಬಾಂಬ್  ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ADVERTISEMENT

ಇಂಡಿಯನ್‌ ನ್ಯಾಷನಲ್‌ ಆರ್ಮಿ (ಐಎನ್‌ಎ) ಕೇಂದ್ರ ಕಚೇರಿಯ ಬಳಿಯೂ ಶುಕ್ರವಾರ ಬಾಂಬ್‌ ದಾಳಿ ನಡೆದಿದೆ.

ಪ್ರತಿಭಟನೆ: ‘ರಾಜ್ಯದಲ್ಲಿ ಕೆಲವು ದಿನಗಳಿಂದ ಡ್ರೋನ್‌ ಹಾಗೂ ಗುಂಡಿನ ದಾಳಿಗಳು ನಡೆಯುತ್ತಿದ್ದು, ಇಬ್ಬರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ. ದೇಶದ ಬೇರೆಡೆ ಇಂಥ ಘಟನೆಗಳು ನಡೆದರೆ ಅದನ್ನು ಖಂಡಿಸಲಾಗುತ್ತದೆ. ಆದರೆ, ನಮ್ಮಲ್ಲಿ ಏಕೆ ಹೀಗಾಗುತ್ತಿಲ್ಲ’ ಎಂದು ಆರೋಪಿಸಿ, ಮೈತೇಯಿ ಸಮುದಾಯದ ಸಾವಿರಾರು ಜನರು ಮಾನವ ಸರಪಳಿ ನಿರ್ಮಿಸಿ ಶುಕ್ರವಾರ ಪ್ರತಿಭಟಿಸಿದರು.

‘ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ’ ಎಂದೂ ಪ್ರತಿಭಟನಕಾರರು ದೂರಿದರು. ರಾಜ್ಯ ಐದು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಕೋ ಆರ್ಡಿನೇಟಿಂಗ್‌ ಕಮಿಟಿ ಆನ್‌ ಮಣಿಪುರ ಇಂಟೆಗ್ರಿಟಿ (ಸಿಒಸಿಒಎಂಐ) ಪ್ರತಿಭಟನೆಯನ್ನು ಆಯೋಜಿಸಿತ್ತು.

ಅಪ್ರಚೋದಿತವಾಗಿ ದಾಳಿಗಳು ನಡೆಯುತ್ತಿವೆ. ದಾಳಿಕೋರರಿಗೆ ವಿದೇಶಗಳಿಂದ ಶಸ್ತ್ರಾಸ್ತ್ರ ಪೂರೈಸಲಾಗುತ್ತಿದೆ.
– ಹಿರೋಜಿತ್‌ ಸಿಂಗ್‌ ಪ್ರತಿಭಟನಕಾರ

ಪ್ರಥಮ ಬಾರಿಗೆ ತ್ರಿವರ್ಣ ಧ್ವಜ ಹಾರಾಡಿದ ಜಾಗದ ಮೇಲೆ ದಾಳಿ ಇಂಡಿಯನ್‌ ನ್ಯಾಷನಲ್‌ ಆರ್ಮಿಯ ಲೆಫ್ಟಿನೆಂಟ್‌ ಕರ್ನಲ್‌ ‌ಶೌಕತ್‌ ಅಲಿ ಅವರು 1944ರ ಏಪ್ರಿಲ್‌ 14ರಂದು ಮೌರ್‍ಯಾಂಗ್‌ನಲ್ಲಿ ಭಾರತದ ನೆಲದಲ್ಲಿ ಪ್ರಥಮ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ನಿರ್ದೇಶನದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಈ ಜಾಗಕ್ಕೆ ಎರಡು ಕೀ.ಮೀ ದೂರದಿಂದ ಬಾಂಬ್‌ ಎಸೆಯಲಾಗಿದೆ. ಬೆಟ್ಟದ ಮೇಲಿಂದ ಬಾಂಬ್‌ ಎಸೆಯಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.