ADVERTISEMENT

ವಕ್ಫ್‌ ಸಮಿತಿ ಸಭೆ: ವಿರೋಧ ಪಕ್ಷಗಳ ಸಂಸದರಿಂದ ಬಹಿಷ್ಕಾರ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಆರೋಪಕ್ಕೆ ತೀವ್ರ ಆಕ್ಷೇಪ–ಮಾತಿನ ಚಕಮಕಿ

ಪಿಟಿಐ
Published 14 ಅಕ್ಟೋಬರ್ 2024, 23:30 IST
Last Updated 14 ಅಕ್ಟೋಬರ್ 2024, 23:30 IST
<div class="paragraphs"><p>ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಸೋಮವಾರ ನಡೆದ ಸಂಸತ್‌ನ ಜಂಟಿ ಸಮಿತಿ ಸಭೆಗೆ ಕಾಂಗ್ರೆಸ್‌ ಸಂಸದ ಗೌರವ್ ಗೊಗೋಯಿ, ಎಐಎಂಐಎಂನ ಅಸಾದುದ್ದೀನ್‌ ಒವೈಸಿ ಭಾಗವಹಿಸಿದರು– </p></div>

ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಸೋಮವಾರ ನಡೆದ ಸಂಸತ್‌ನ ಜಂಟಿ ಸಮಿತಿ ಸಭೆಗೆ ಕಾಂಗ್ರೆಸ್‌ ಸಂಸದ ಗೌರವ್ ಗೊಗೋಯಿ, ಎಐಎಂಐಎಂನ ಅಸಾದುದ್ದೀನ್‌ ಒವೈಸಿ ಭಾಗವಹಿಸಿದರು–

   

ಪಿಟಿಐ ಚಿತ್ರ

ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ಸಂಬಂಧಿಸಿದಂತೆ ಸಂಸತ್‌ನ ಜಂಟಿ ಸಮಿತಿಯು ಕಾನೂನು ಹಾಗೂ ನಿಯಾಮವಳಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷಗಳ ಹಲವು ಸಂಸದರು ಸೋಮವಾರ ನಡೆದ ಸಭೆಯನ್ನು ಬಹಿಷ್ಕರಿಸಿದರು. 

ADVERTISEMENT

ಸಂಸತ್‌ನಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷದ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು. ಮುಸಲ್ಮಾನರಿಗೆ ಸಂಬಂಧಿಸಿದ ಕಾನೂನಿಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿದ ಔಚಿತ್ಯವನ್ನು ಪ್ರಶ್ನಿಸಿದರು.

ಖರ್ಗೆ ಹೆಸರು ಉಲ್ಲೇಖ– ಆಕ್ರೋಶ: ‘ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳ ಕಬಳಿಕೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ರೆಹಮಾನ್‌ ಖಾನ್‌ ಅವರು ತೊಡಗಿದ್ದಾರೆ’ ಎಂದು ಬಿಜೆಪಿಯ ಮಾಜಿ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರು ಸಭೆಯಲ್ಲಿ ಹೆಸರು ಉಲ್ಲೇಖಿಸಿದರು.

‘ಉನ್ನತ ಗಣ್ಯರ ವಿರುದ್ಧ ಸಾಬೀತಾಗದ ಆರೋಪಗಳನ್ನು ಮಾಡಲಾಗುತ್ತಿದೆ. ಈ ಸಮಿತಿಯಲ್ಲಿ ಅದನ್ನು ಪ್ರಸ್ತಾಪಿಸುವುದು ಸರಿಯಲ್ಲ. ಸಭೆಯಲ್ಲಿ ಇರದವರ ವಿರುದ್ಧ ಆರೋಪ ಮಾಡುತ್ತಿದ್ದು, ಅವರು ತಮ್ಮ ಮೇಲಿನ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ವಿರೋಧ ಪಕ್ಷದ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

ಆದರೆ, ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್‌ ಅವರು ವಿರೋಧ ಪಕ್ಷದವರ ಆರೋಪಗಳನ್ನು ತಳ್ಳಿಹಾಕಿ, ಮಾಣಿಪ್ಪಾಡಿ ಅವರಿಗೆ ಮಾತನಾಡಲು ಅವಕಾಶ ನೀಡಿದರು.

‘ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳು ಕೆಲವರಿಂದ ಕಬಳಿಕೆಯಾಗಿದ್ದು, ಮಸೂದೆಗೆ ಸಂಬಂಧಿಸಿದ್ದೇ ಆಗಿದೆ’ ಎಂದು ಮಾಣಿಪ್ಪಾಡಿ ಸಮರ್ಥಿಸಿಕೊಂಡರು.

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಸಂಸದರಾದ ಗೌರವ್ ಗೊಗೋಯಿ, ಇಮ್ರಾನ್‌ ಮಸೂದ್‌, ಡಿಎಂಕೆಯ ಎ.ರಾಜಾ, ಶಿವಸೇನಾದ (ಉದ್ಧವ್‌ ಬಣ) ಅರವಿಂದ್‌ ಸಾವಂತ್‌, ಎಐಎಂಐಎಂನ ಅಸಾದುದ್ದೀನ್‌ ಒವೈಸಿ, ಸಮಾಜವಾದಿ ಪಕ್ಷದ ಮೊಹಿಬುಲ್ಲಾ, ಆಮ್ ಆದ್ಮಿ ಪಕ್ಷದ ಸಂಜಯ್‌ ಸಿಂಗ್‌ ಅವರು ಸಮಿತಿ ಸಭೆಯ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರ ನಡೆದರು.

‘ವಕ್ಫ್‌ (ತಿದ್ದುಪಡಿ) ಮಸೂದೆ ಪರಿಶೀಲನೆ ನಡೆಸುತ್ತಿರುವ ಜಂಟಿ ಸದನ ಸಮಿತಿಯು ಕಾನೂನಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಸಾವಂತ್‌ ಅವರು ಮಾಧ್ಯಮಗಳಿಗೆ ತಿಳಿಸಿದರು.

ಮುಂದಿನ ಕಾರ್ಯವಿಧಾನ ಕುರಿತಂತೆ ವಿರೋಧ ಪಕ್ಷದ ಸಂಸದರು ಪ್ರತ್ಯೇಕ ಸಭೆ ನಡೆಸಿದರು. ಈ ಕುರಿತು ಲೋಕಸಭಾ ಸ್ಪೀಕರ್‌ ಅವರಲ್ಲಿ ಮನವಿ ಮಾಡುವ ಕುರಿತಂತೆ ಕೆಲವು ಸದಸ್ಯರು ಸಲಹೆ ನೀಡಿದರು. ಸಮಿತಿ ಕಾರ್ಯವೈಖರಿ ಕುರಿತಂತೆ ಮಂಗಳವಾರ ಸ್ಪೀಕರ್‌ ಪತ್ರ ಬರೆಯುವ ಸಾಧ್ಯತೆಯಿದೆ.

ಜಂಟಿ ಸದನ ಸಮಿತಿಯಲ್ಲಿ ವಕ್ಫ್‌ ಆಸ್ತಿ ಕಬಳಿಕೆಯ ಉಲ್ಲೇಖ ಅನ್ವರ್‌ ಮಾಣಿಪ್ಪಾಡಿ ಆರೋಪಕ್ಕೆ ವಿರೋಧ ಪಕ್ಷದ ಸಂಸದರ ಆಕ್ಷೇಪ ಸಭೆ ಬಹಿಷ್ಕಾರ; ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧಾರ
ಹಿಂದೂ ಸಂಘಟನೆಗಳ ಆಹ್ವಾನಕ್ಕೆ ವಿರೋಧ
ಸಮಿತಿ ಸಭೆಗೆ ಹಿಂದೂ ಸಂಘಟನೆಯ ಮುಖಂಡರನ್ನು ಆಹ್ವಾನಿಸಿದ್ದಕ್ಕೆ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ದಾಖಲಿಸಿದರು. ವಕ್ಫ್‌ (ತಿದ್ದುಪಡಿ) ಮಸೂದೆಯು ಮುಸ್ಲಿಮರಿಗೆ ಸಂಬಂಧಿಸಿದ್ದು ಹಿಂದೂ ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಲು ಮುಂದಾದ ವೇಳೆ ಆಕ್ಷೇಪ ವ್ಯಕ್ತಪಡಿಸಿದರು. ‘ವಕ್ಫ್‌ ಕಾಯ್ದೆಯಿಂದ ಮುಸ್ಲಿಂಯೇತರ ದೇವಸ್ಥಾನ ಸೇರಿದಂತೆ ಇತರೆ ಆಸ್ತಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯ ದಾಖಲಿಸಲು ಸಂಘಟನೆ ಹಾಗೂ ಮುಖಂಡರು ಭಾಗವಹಿಸಿದ್ದಾರೆ. ಅವರು ಅಭಿಪ್ರಾಯ ದಾಖಲಿಸಿದ ಬಳಿಕ ಸಮಿತಿಯು ವಿಸ್ತೃತ ಸಮಾಲೋಚನೆ ನಡೆಸಬಹುದು’ ಬಿಜೆಪಿ ಸಂಸದರು ತಿಳಿಸಿದರು. ‘ಮೂಲಭೂತ ಸಿದ್ದಾಂತ ಹೊಂದಿರುವ ಸನಾತನ ಸಂಸ್ಥೆ ಹಿಂದೂ ಜನಜಾಗೃತಿ ಸಂಸ್ಥೆಯು ‘ಹಿಂದೂರಾಷ್ಟ್ರ‘ ನಿರ್ಮಾಣ ಮಾಡುವ ಗುರಿ ಹೊಂದಿದ್ದು ದೇಶದಲ್ಲಿ ಹಿಂಸಾಚಾರದಲ್ಲಿ ತೊಡಗಿದೆ. ಇಂತಹವರಿಗೆ ಆಹ್ವಾನ ನೀಡಿದ್ದು ಸರಿಯಲ್ಲ’ ಎಂದು ಸಮಿತಿ ಅಧ್ಯಕ್ಷ ಪಾಲ್‌ ಅವರಿಗೆ ಪತ್ರ ಬರೆದಲ್ಲಿ ಒವೈಸಿ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಕೀಲರಾದ ವಿಷ್ಣುಶಂಕರ್‌ ಜೈನ್‌ ಅಶ್ವಿನಿ ಉಪಾಧ್ಯಾಯ್‌ ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ್ ದೇಗುಲದ ಮಹಾಂತ ಸುಧೀರ್‌ದಾಸ್‌ ಮಹಾರಾಜ್‌ ಅವರನ್ನು ಸಭೆಗೆ ಕರೆದಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಜಮೀಯತ್‌ ಉಲೇಮಾ–ಎ– ಹಿಂದ್‌ನ ಮಹಮ್ಮದ್‌ ಮದನಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಉದ್ದೇಶಿತ ವಕ್ಫ್‌(ತಿದ್ದುಪಡಿ) ಮಸೂದೆಗೆ ಸಂಘಟನೆಯು ಬಲವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.