ADVERTISEMENT

ಭಾರತ ಮಾತೆ ಮೇಲೆ ನಂಬಿಕೆ ಇರುವವರಿಗೆ ಪೌರತ್ವ: ಮೋದಿಯ ಗ್ಯಾರಂಟಿಯಾಗಿದೆ; ಪ್ರಧಾನಿ

ಪಿಟಿಐ
Published 4 ಏಪ್ರಿಲ್ 2024, 13:33 IST
Last Updated 4 ಏಪ್ರಿಲ್ 2024, 13:33 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ಕೂಚ್ ಬೆಹಾರ್: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಸುಳ್ಳು ಹಬ್ಬಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ‘ಭಾರತ ಮಾತೆಯ ಮೇಲೆ ನಂಬಿಕೆ ಇರಿಸಿದವರಿಗೆ ಪೌರತ್ವ ನೀಡುವುದು ಮೋದಿ ಕಿ ಗ್ಯಾರಂಟಿ’ ಎಂದು ಒತ್ತಿ ಹೇಳಿದರು.

ADVERTISEMENT

ಪಶ್ಚಿಮ ಬಂಗಾಳದ ಕೂಚ್‌ ಬಿಹಾರ್‌ನಲ್ಲಿ ಗುರುವಾರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ದೌರ್ಜನ್ಯಕ್ಕೆ ಒಳಗಾದ ಸಮುದಾಯಗಳನ್ನು ಅವರು (ಇಂಡಿಯಾ ಒಕ್ಕೂಟ) ಕಡೆಗಣಿಸಿದ್ದಾರೆ. ನಾವು ತಂದಿರುವ ಸಿಎಎ ವಿರುದ್ಧ ಅವರು ಸುಳ್ಳು ಹರಡುತ್ತಿದ್ದಾರೆ’ ಎಂದು ದೂರಿದರು.

ಸಂದೇಶ್‌ಖಾಲಿ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಿ, ‘ಸಂದೇಶ್‌ಖಾಲಿ ಪ್ರಕರಣದ ತಪ್ಪಿತಸ್ಥರು ತಮ್ಮ ಜೀವನದ ಇನ್ನುಳಿದ ಅವಧಿಯನ್ನು ಜೈಲಿನಲ್ಲಿ ಕಳೆಯಲಿದ್ದಾರೆ’ ಎಂದರು.

‘ಬಂಗಾಳದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಸಂದೇಶ್‌ಖಾಲಿ ಘಟನೆಯ ಹಿಂದಿರುವವರನ್ನು ರಕ್ಷಿಸಲು ಟಿಎಂಸಿ ಹೇಗೆ ಪ್ರಯತ್ನಿಸಿದೆ ಎಂಬುದನ್ನು ಇಡೀ ದೇಶವೇ ನೋಡಿದೆ. ಸಂದೇಶ್‌ಖಾಲಿ ಮಹಿಳೆಯರಿಗೆ ಇಂತಹ ಸ್ಥಿತಿ ಎದುರಾಗಲು ಟಿಎಂಸಿಯ ದುರಾಡಳಿತವೇ ಕಾರಣ’ ಎಂದು ಟೀಕಿಸಿದರು.

‘ಭ್ರಷ್ಟರಿಗೆ ಶಿಕ್ಷೆಯಾಗುವುದನ್ನು ನಾನು ಖಾತರಿಪಡಿಸುತ್ತೇನೆ. ಬಡವರಿಗೆ ನ್ಯಾಯ ಸಿಗಬೇಕು. ಮುಂದಿನ ಐದು ವರ್ಷಗಳಲ್ಲಿ ಭ್ರಷ್ಟರ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.