ನವದೆಹಲಿ: ಜೈಲಿನಲ್ಲಿ ಇದ್ದೇ ಜಯಗಳಿಸಿರುವ ಅಮೃತ್ಪಾಲ್ ಸಿಂಗ್ ಮತ್ತು ಶೇಖ್ ಅಬ್ದುಲ್ ರಶೀದ್ ಅವರು ಶುಕ್ರವಾರ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಚುನಾವಣೆಯಲ್ಲಿ ಗೆದ್ದಿರುವ ಇವರಿಗೆ ಪ್ರಮಾಣ ವಚನ ಸ್ವೀಕರಿಸುವ ಸಲುವಾಗಿ ನ್ಯಾಯಾಲಯ ಪೆರೋಲ್ ನೀಡಿತ್ತು. ಅವರಿಬ್ಬರನ್ನೂ ಭದ್ರತಾ ಸಿಬ್ಬಂದಿಯು ಸಂಸತ್ತಿನ ಆವರಣಕ್ಕೆ ಕರೆತಂದರು. ಅಲ್ಲಿಯೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಶಿಷ್ಟಾಚಾರಗಳನ್ನು ಪೂರೈಸಿದ ಬಳಿಕ ಲೋಕಸಭಾ ಸ್ವೀಕರ್ ಅವರ ಕೋಣೆಯಲ್ಲಿ ಅವರಿಬ್ಬರು ಪ್ರಮಾಣ ವಚನ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.
ಇಂಜಿನಿಯರ್ ರಶೀದ್ ಎಂದೇ ಪ್ರಸಿದ್ಧರಾಗಿರುವ ಕಾಶ್ಮೀರಿ ನಾಯಕ ರಶೀದ್ ವಿರುದ್ಧ ಭಯೋತ್ಪಾದನೆಗೆ ಹಣ ಒದಗಿಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಅವರು ತಿಹಾರ ಜೈಲಿನಲ್ಲಿದ್ದಾರೆ. ಅವರಿಗೆ 2 ಗಂಟೆಗಳ ಪೆರೋಲ್ ನೀಡಲಾಗಿತ್ತು.
ಖಾಲಿಸ್ತಾನ ಪರ ಒಲವುಳ್ಳ ಸಿಖ್ ನಾಯಕ ಅಮೃತ್ಪಾಲ್ ಸಿಂಗ್ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿದ್ದರು. ಅವರನ್ನು ಏಪ್ರಿಲ್ 2023ರಂದು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.