ADVERTISEMENT

ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಆತ್ಮಾಹುತಿಗೆ ಸಮ: NCERT ನಿರ್ದೇಶಕ

ರಾಷ್ಟ್ರೀಯ ಶಿಕ್ಷಣ ಸಂ‌ಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್‌ ಪ್ರಸಾದ್ ಸಕ್ಲಾನಿ

ಪಿಟಿಐ
Published 18 ಜೂನ್ 2024, 11:30 IST
Last Updated 18 ಜೂನ್ 2024, 11:30 IST
<div class="paragraphs"><p>ದಿನೇಶ್‌ ಪ್ರಸಾದ್‌ ಸಕ್ಲಾನಿ</p></div>

ದಿನೇಶ್‌ ಪ್ರಸಾದ್‌ ಸಕ್ಲಾನಿ

   

ನವದೆಹಲಿ: ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿರುವುದು, ಕಳುಹಿಸಬೇಕೆನ್ನುವುದು ಆತ್ಮಾಹುತಿಗೆ ಸಮ ಎಂದು ರಾಷ್ಟ್ರೀಯ ಶಿಕ್ಷಣ ಸಂ‌ಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್‌ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.

ಪಿಟಿಐ ಜೊತೆಗೆ ಮಾತನಾಡಿರುವ ಅವರು, ಪ್ರಸ್ತುತ ಬಹುತೇಕ ಸರ್ಕಾರಿ ಶಾಲೆಗಳು ಸಾಕಷ್ಟು ಸುಧಾರಿಸಿವೆ. ನುರಿತ ಹಾಗೂ ಸೂಕ್ತ ತರಬೇತಿ ಪಡೆದ ಶಿಕ್ಷಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂಗ್ಲಿಷ್ ವ್ಯಾಮೋಹ ಇಟ್ಟುಕೊಂಡು ಪೋಷಕರು ತರಬೇತಿ ಇರದ ಹಾಗೂ ಅಷ್ಟೊಂದು ನುರಿತ ಅಲ್ಲದ ಶಿಕ್ಷಕರಿರುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದು ಒಂದು ರೀತಿ ಆತ್ಮಾಹುತಿ ಮಾಡಿಕೊಂಡಂತೆ ಎಂದು ನುಡಿದಿದ್ದಾರೆ.

ADVERTISEMENT

ಇಂಗ್ಲಿಷ್ ಕಡೆಗಿನ ವ್ಯಾಮೋಹವು ಮಕ್ಕಳನ್ನಷ್ಟೇ ಅಲ್ಲದೇ ಪೋಷಕರನ್ನು ಹಾಳು ಮಾಡುತ್ತಿದೆ. ನಮ್ಮ ಹಿನ್ನೆಲೆ ಹಾಗೂ ಸಂಸ್ಕೃತಿಯನ್ನು ಮರೆಯುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಅದಕ್ಕಾಗಿಯೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಒತ್ತು ನೀಡಿರುವುದು ಎಂದು ಹೇಳಿದ್ದಾರೆ.

ಮೊದಲು ಮಾತೃಭಾಷೆ ಸರಿಯಾಗಿ ಕಲಿತರೇ ಉಳಿದ ಭಾಷೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಅಲ್ಲದೇ ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನೂ ಉಳಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

‘ಸಂವಿಧಾನದಲ್ಲಿ ಇರುವಂತೆ ಪಠ್ಯಪುಸ್ತಕಗಳಲ್ಲೂ ಪರ್ಯಾಯವಾಗಿ ‘ಭಾರತ’ ಅಥವಾ ‘ಇಂಡಿಯಾ’ ಬಳಸಲಾಗುತ್ತದೆ. ಈ ಕುರಿತ ಚರ್ಚೆಯೇ ನಿಷ್ಪ್ರಯೋಜಕ’ ಎಂದು ಅವರು ವಿವಾದದ ಕುರಿತಂತೆ ಹೇಳಿದ್ದರು.

‘ಪಠ್ಯಗಳಲ್ಲಿ ಎರಡೂ ಪದಗಳನ್ನು ಬಳಸಲಾಗುತ್ತದೆ. ‘ಭಾರತ’ ಅಥವಾ ‘ಇಂಡಿಯಾ’ ಪದವನ್ನು ಎನ್‌ಸಿಇಆರ್‌ಟಿ ತಿರಸ್ಕರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಸಂವಿಧಾನದಲ್ಲಿ ಹೇಳಿರುವುದನ್ನು ಎತ್ತಿಹಿಡಿಯುವುದು ನಮ್ಮ ಕೆಲಸ. ನಾವು ಭಾರತ ಅಥವಾ ಇಂಡಿಯಾ ಬಳಸಬಹುದು. ಅದರಲ್ಲಿ ಸಮಸ್ಯೆ ಏನಿದೆ? ಈ ಕುರಿತ ಚರ್ಚೆಯಲ್ಲಿ ನಾವು ಭಾಗಿಯಾಗುವುದಿಲ್ಲ. ಯಾವುದು ಸೂಕ್ತವೋ ಅದನ್ನು ಬಳಸುತ್ತೇವೆ’ ಎಂದು ಸಕ್ಲಾನಿ ಅವರು ಹೇಳಿದರು. 

ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಎನ್‌ಸಿಇಆರ್‌ಟಿ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ಎಲ್ಲ ತರಗತಿಗಳ ಪಠ್ಯಪುಸ್ತಕದಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ’ ಪದ ಬಳಸಲು ಕಳೆದ ವರ್ಷ ಶಿಫಾರಸು ಮಾಡಿತ್ತು.

ಈ ಕುರಿತು ಸಮಿತಿಯ ಅಧ್ಯಕ್ಷ ಸಿ.ಐ.ಐಸಾಕ್‌ ಅವರು, ಪಠ್ಯದಲ್ಲಿ ಪ್ರಾಚೀನ ಇತಿಹಾಸ ಬದಲಿಗೆ ಶಾಸ್ತ್ರೀಯ ಇತಿಹಾಸ ಪರಿಚಯಿಸಲಾಗುವುದು’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.