ನಾಗ್ಪುರ: ಸ್ವಾತಂತ್ರ್ಯ ದಿನಾಚರಣೆಯಂದು ಮಾಡಿದ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದ್ದರು. ಆದರೆ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ ಜೊತೆಯಲ್ಲಿಯೇ ಮಹಾರಾಷ್ಟ್ರದ ಚುನಾವಣೆಯನ್ನು ಏಕೆ ನಡೆಸುತ್ತಿಲ್ಲ’ ಎಂದು ಎನ್ಸಿಪಿ (ಶರದ್ ಬಣ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
‘2019ರಲ್ಲಿ ಹರಿಯಾಣ ಚುನಾವಣೆ ಜೊತೆಯಲ್ಲೇ ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಚುನಾವಣೆ ನಡೆದಿತ್ತು. ಈ ಬಾರಿಯ ಚುನಾವಣೆಯ ವೇಳಾಪಟ್ಟಿಯನ್ನು ಗಮನಿಸಿದರೆ ಪ್ರಧಾನಿ ಮೋದಿ ಅವರ ಮಾತಿನಲ್ಲೂ ಸತ್ಯ ಇರುವುದಿಲ್ಲ ಎಂದಾಯಿತು’ ಎಂದು ಅವರು ಲೇವಡಿ ಮಾಡಿದರು.
‘ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮಹಾರಾಷ್ಟ್ರದ ಜನರನ್ನು ‘ಮೂರ್ಖ’ರನ್ನಾಗಿಸಲು ಬಿಜೆಪಿ ನೇತೃತ್ವದ ‘ಮಹಾಯುತಿ’ ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶಬೇಕು. ಆದ್ದರಿಂದಲೇ ರಾಜ್ಯದಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ’ ಎಂದು ಶಿವಸೇನಾ (ಉದ್ಧವ್ ಬಣ), ಕಾಂಗ್ರೆಸ್, ಎನ್ಸಿಪಿ (ಶರದ್ ಬಣ) ಚುನಾವಣಾ ಆಯೋಗದ ಕ್ರಮವನ್ನು ಶುಕ್ರವಾರ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.