ADVERTISEMENT

ಶರದ್‌ ಪವಾರ್‌ ಬಗ್ಗೆ BJP ಸಚಿವ ಹೇಳಿದ್ದೇ ಬಾರಾಮತಿಯಲ್ಲಿ ಸೋಲಿಗೆ ಕಾರಣ: ಅಜಿತ್

ಪಿಟಿಐ
Published 7 ಜೂನ್ 2024, 16:06 IST
Last Updated 7 ಜೂನ್ 2024, 16:06 IST
ಅಜಿತ್ ಪವಾರ್‌
ಅಜಿತ್ ಪವಾರ್‌   

ಮುಂಬೈ: ಇತ್ತೀಚೆಗೆ ಅಂತ್ಯಗೊಂಡ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್‌ ವಿರುದ್ಧ ಸಚಿವ ಚಂದ್ರಕಾಂತ್ ಪಾಟೀಲ್‌ ಅವರು ಮಾತನಾಡಿದ್ದೇ ಬಾರಾಮತಿಯಲ್ಲಿ ನಮ್ಮ ಸೋಲಿಗೆ ಕಾರಣವಾಯಿತು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಯಿಂದಾಗಿಯೇ ಬಾರಾಮತಿಯಲ್ಲಿ ತಮ್ಮ ಪತ್ನಿ ಸುನೇತ್ರಾ ಪವಾರ್ ಅವರು ಸುಪ್ರಿಯಾ ಸುಳೆ ಅವರ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಸೋಲು ಅನುಭವಿಸಿದರು. ಚಂದ್ರಕಾಂತ್‌ ಅವರು ಶರದ್ ಪವಾರ್‌ ಅವರ ಬಗ್ಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.

‌‘ಶರದ್ ಪವರ್ ಅವರನ್ನು ಅವರ ಭದ್ರಕೋಟೆಯಲ್ಲೇ ಸೋಲಿಸಬೇಕು. 2019ರಲ್ಲಿ ಸಂಖ್ಯಾಬಲ ಇದ್ದರೂ, ಬಿಜೆಪಿ–ಶಿವಸೇನೆ ಮೈತ್ರಿಯನ್ನು ಮುರಿದಿದ್ದರು. ಬಾರಾಮತಿಯಲ್ಲಿ ಶರದ್ ಪವಾರ್‌ ಅವರನ್ನು ಸೋಲಿಸಲು ನಾನು ಹಾಗೂ ನನ್ನ ಕಾರ್ಯಕರ್ತರು ನಿರ್ಧಾರ ಮಾಡಿದ್ದೇವೆ. ನಮಗೆ ಅದು ಸಾಕು ಎಂದು ಚುನಾವಣೆ ಪ್ರಚಾರದ ವೇಳೆಯಲ್ಲಿ ಚಂದ್ರಕಾಂತ್‌ ಹೇಳಿದ್ದರು.

ADVERTISEMENT

ಇದಕ್ಕೆ ಈಗ ಪ್ರತಿಕ್ರಿಯಿಸಿರುವ ಅಜಿತ್‌, ‘ಬಾರಾಮತಿಯಲ್ಲಿ ಶರದ್ ಪವಾರ್‌ ಅವರು ಸ್ಪರ್ಧಿಸಿರಲಿಲ್ಲ. ಚಂದ್ರಕಾಂತ್ ಅವರ ಹೇಳಿಕೆ ತಪ್ಪು. ಆ ಬಳಿಕ ಬಾರಾಮತಿಯಲ್ಲಿ ಪ್ರಚಾರ ಮಾಡಬಾರದು ಎಂದು ನಾನು ಅವರಿಗೆ ಹೇಳಿದ್ದೆ’ ಎಂದು ಅಜಿತ್‌ ನುಡಿದಿದ್ದಾರೆ.

‘ನಾನು ಆಗಲೂ ಹೇಳಿದ್ದೆ, ಈಗಲೂ ಹೇಳುತ್ತೇನೆ. ಶರದ್ ಪವಾರ್‌ ಅವರನ್ನು ಸೋಲಿಸಲು ಬಾರಾಮತಿಗೆ ಬಂದಿದ್ದೇನೆ ಎಂದು ಚಂದ್ರಕಾಂತ್ ಹೇಳಿದ್ದು ಜನರಿಗೆ ಇಷ್ಟವಾಗಲಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.