ADVERTISEMENT

ಸರ್ವಾಧಿಕಾರ ಧೋರಣೆ ವಿರುದ್ಧ ಹೋರಾಟ ನಡೆಸುವಂತೆ ಜನರಿಗೆ ಕರೆ ನೀಡಿದ ಸಿಸೋಡಿಯಾ

ಪಿಟಿಐ
Published 10 ಆಗಸ್ಟ್ 2024, 11:35 IST
Last Updated 10 ಆಗಸ್ಟ್ 2024, 11:35 IST
<div class="paragraphs"><p>ಮನೀಶ್‌ ಸಿಸೋಡಿಯಾ ( ಸಂಗ್ರಹ ಚಿತ್ರ)</p></div>

ಮನೀಶ್‌ ಸಿಸೋಡಿಯಾ ( ಸಂಗ್ರಹ ಚಿತ್ರ)

   

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ 17 ತಿಂಗಳ ಬಳಿಕ ಸೆರೆ ವಾಸದಿಂದ ಮುಕ್ತರಾಗಿರುವ ಎಎಪಿ ನಾಯಕ ಮನೀಶ್‌ ಸಿಸೋಡಿಯಾ ಅವರು, ಸರ್ವಾಧಿಕಾರ ಧೋರಣೆ ವಿರುದ್ಧ ಹೋರಾಟ ನಡೆಸಲು ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಶನಿವಾರ ಕರೆ ನೀಡಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಯಾವ ವ್ಯಕ್ತಿಗಳು ಅಥವಾ ಯಾವ ಶಕ್ತಿಯು ಸಂವಿಧಾನಕ್ಕಿಂತ ದೊಡ್ಡದ್ದಲ್ಲ. ನಾಯಕರನ್ನು ಜೈಲಿಗೆ ಕಳುಹಿಸುವುದು, ನಾಗರಿಕರಿಗೆ ಕಿರುಕುಳ ನೀಡುವ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಪ್ರತಿಯೊಬ್ಬ ವ್ಯಕ್ತಿಯು ಹೋರಾಟ ನಡೆಸಬೇಕು’ ಎಂದು ಹೇಳಿದ್ದಾರೆ.

ADVERTISEMENT

ಈ ಪ್ರಕರಣದಲ್ಲಿ ಜೈಲು ಸೇರಿರುವ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೇಶದ ಪ್ರಾಮಾಣಿಕತೆಯ ಪ್ರತೀಕವಾಗಿದ್ದಾರೆ. ಕೇಜ್ರಿವಾಲ್ ಅವರನ್ನು ಉದ್ದೇಶ ಪೂರ್ವಕವಾಗಿಯೇ ಜೈಲಿಗೆ ಕಳುಹಿಸಲಾಗಿದೆ. ವಿರೋಧ ಪಕ್ಷಗಳು ಒಂದಾದರೆ ಕೇವಲ 24 ಗಂಟೆಗಳಲ್ಲಿ ಅರವಿಂದ ಕೇಜ್ರಿವಾಲ್ ಹೊರಗೆ ಬರುತ್ತಾರೆ ಎಂದು ತಿಳಿಸಿದ್ದಾರೆ.

‘ನಾವು ಕೇವಲ ರಥದ ಕುದುರೆಗಳು ಆದರೆ ನಮ್ಮ ನಿಜವಾದ 'ಸಾರಥಿ' ( ಕೇಜ್ರಿವಾಲ್) ಜೈಲಿನಲ್ಲಿದ್ದಾರೆ. ಅವರು ಶೀಘ್ರದಲ್ಲೇ ಹೊರಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿರುವ ಕುರಿತು ಮಾತನಾಡಿದ ಸಿಸೋಡಿಯಾ, ‘ಸರ್ವಾಧಿಕಾರದ ಧೋರಣೆಯನ್ನು ಹೋಗಲಾಡಿಸಲು ಸಂವಿಧಾನದ ಅಧಿಕಾರವನ್ನು ಬಳಸಲಾಗಿದೆ‘ ಎಂದು ಅಭಿಪ್ರಾಯಪಟ್ಟರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದವು. ಈ ಎರಡೂ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿ ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್‌ನ ಮೇ 21ರ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಅಲ್ಲದೆ ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.