ಚೆನ್ನೈ: ಕಳೆದ ಎರಡು ದಿನಗಳಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸುರಿದ ದಾಖಲೆಯ ಮಳೆಗೆ ಹತ್ತು ಜನ ಮೃತಪಟ್ಟಿದ್ದಾರೆ ಎಂದು ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಮಂಗಳವಾರ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಹೆಚ್ಚಿನ ಮಳೆ ಸುರಿಯಲಿದೆ ಎಂದಷ್ಟೇ ಹೇಳಿತ್ತು. ಆದರೆ ಅದರ ಬದಲು ಎರಡು ದಿನಗಳಲ್ಲಿ ಭಾರೀ ಮಳೆ ಈ ಭಾಗದಲ್ಲಿ ಸುರಿದಿದೆ. ತಿರುನಲ್ವೇಲಿ ಮತ್ತು ತೂತುಕುಡಿ ಜಿಲ್ಲೆಯಲ್ಲಿ ಹತ್ತು ಜನ ಮೃತಪಟ್ಟಿದ್ದಾರೆ. ಇವರಲ್ಲಿ ಹಲವರು ಮನೆಯ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ತೂತುಕುಡಿ ಜಿಲ್ಲೆಯ ಕಯಾಲಪಟ್ಟನಂ ಊರಿನಲ್ಲಿ 115 ಸೆಂ.ಮೀ. ಮಳೆಯಾಗಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಹೇಳಿರಲಿಲ್ಲ. ತಿರುಚೆಂಡೂರಿನಲ್ಲಿ 92.1 ಸೆಂ.ಮೀ. ಮಳೆಯಾಗಿದೆ. ಈ ಪ್ರದೇಶಗಳು ತಮಿರಭರಣಿ ನದಿ ದಡದಲ್ಲಿವೆ. ಹೀಗಾಗಿ ತೀವ್ರವಾಗಿ ಬಾಧಿತ ಪ್ರದೇಶಗಳಾಗಿವೆ’ ಎಂದು ವಿವರಿಸಿದರು.
‘ರಕ್ಷಣಾ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ 1,343 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ವಿಪತ್ತು ನಿರ್ವಹಣಾ ತಂಡಗಳು ಹಗಲಿರುಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿವೆ. ಈವರೆಗೂ 160 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. 17 ಸಾವಿರ ಜನರಲ್ಲಿ ಇಲ್ಲಿ ಇರಿಸಲಾಗಿದೆ. ಸುಮಾರು 34 ಸಾವಿರ ಆಹಾರ ಪೊಟ್ಟಣಗಳನ್ನು ಈವರೆಗೂ ನಿತ್ಯ ನೀಡಲಾಗುತ್ತಿದೆ. ಹಲವೆಡೆ ನೀರಿನ ಮಟ್ಟ ಇಳಿಯದ ಕಾರಣ ಈವರೆಗೂ ಇನ್ನೂ ಕೆಲವು ಗ್ರಾಮಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ಮೀನಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.