ADVERTISEMENT

ಕುವೈತ್‌ ಅಗ್ನಿ ದುರಂತ: ಕೇರಳದತ್ತ ಹೊರಟ 45 ಭಾರತೀಯರ ಮೃತದೇಹ ಹೊತ್ತ ವಿಮಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2024, 3:16 IST
Last Updated 14 ಜೂನ್ 2024, 3:16 IST
   

ನವದೆಹಲಿ: ಕುವೈತ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನ ಕೇರಳದತ್ತ ಹೊರಟಿದೆ.

ಬೆಳಿಗ್ಗೆ 11 ಗಂಟೆಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿಯಲಿದ್ದು ಬಳಿಕ ವಿಮಾನ ದೆಹಲಿಗೆ ತೆರಳಲಿದೆ.

ಮೃತದೇಹಗಳನ್ನು ಸ್ವದೇಶಕ್ಕೆ ತರುವ ನಿಟ್ಟಿನಲ್ಲಿ ಕುವೈತ್‌ಗೆ ತೆರಳಿದ್ದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಅದೇ ವಿಮಾನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ADVERTISEMENT

ಈ ಕುರಿತು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ದುರಂತದಲ್ಲಿ 23 ಮಂದಿ ಕೇರಳದವರು ಹಾಗೂ ತಮಿಳುನಾಡಿನ 7, ಉತ್ತರಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್‌, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಹರಿಯಾಣದ ಒಬ್ಬರು ಮೃತಪಟ್ಟಿದ್ದರು.

ಘಟನೆಯಲ್ಲಿ ಗಾಯಗೊಂಡ 33 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಿದ್ಧತೆ

ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತದೇಹಗಳನ್ನು ಪಡೆಯಲು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಳಿಗ್ಗೆ 10.30ರ ಹೊತ್ತಿಗೆ ವಿಮಾನ ಕೊಚ್ಚಿಗೆ ತಲುಪಲಿದೆ. ಟರ್ಮಿನಲ್‌ನಲ್ಲಿ ನೀರವ ಮೌನ ಆವರಿಸಿದೆ. ಮೃತದೇಹಗಳನ್ನು ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕೇರಳದ 23, ತಮಿಳುನಾಡಿನ 7 ಹಾಗೂ ಕರ್ನಾಟಕದ ಒಬ್ಬರ ಮೃತದೇಹವನ್ನು ಮಾತ್ರ ಪಡೆಯಲಾಗುವುದು’ ಎಂದು ಎರ್ನಾಕುಲಂ ರೇಂಜ್‌ನ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಪುಟ್ಟ ವಿಮಲಾದಿತ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.