ADVERTISEMENT

ನೈತಿಕ ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ಡಿಜಿಟಲ್ ನಿಯಮ ಅಗತ್ಯ: PM ನರೇಂದ್ರ ಮೋದಿ

ಪಿಟಿಐ
Published 15 ಅಕ್ಟೋಬರ್ 2024, 10:01 IST
Last Updated 15 ಅಕ್ಟೋಬರ್ 2024, 10:01 IST
<div class="paragraphs"><p>ನವದೆಹಲಿಯ ಭಾರತ ಮಂಟಪಂನಲ್ಲಿ ಆಯೋಜನೆಗೊಂಡಿರುವ ಐಟಿಯು ಜಾಗತಿಕ ದೂರಸಂಪರ್ಕ ಪ್ರಮಾಣೀಕರಣ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಆವಿಷ್ಕಾರಗಳ ಕುರಿತು ಮಾಹಿತಿ ಪಡೆದರು</p></div>

ನವದೆಹಲಿಯ ಭಾರತ ಮಂಟಪಂನಲ್ಲಿ ಆಯೋಜನೆಗೊಂಡಿರುವ ಐಟಿಯು ಜಾಗತಿಕ ದೂರಸಂಪರ್ಕ ಪ್ರಮಾಣೀಕರಣ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಆವಿಷ್ಕಾರಗಳ ಕುರಿತು ಮಾಹಿತಿ ಪಡೆದರು

   

ಪಿಟಿಐ ಚಿತ್ರ

ನವದೆಹಲಿ: ‘ಅಂತರ್ಜಾಲದ ಮೂಲಕ ಅಂತರ್‌ಸಂಪರ್ಕಿತ ಜಗತ್ತಿನಲ್ಲಿ ಭದ್ರತೆ ಎಂಬುದು ಎರಡನೇ ಆಯ್ಕೆಯಾಗಿರಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಗಾಗಿ ಜಾಗತಿಕ ಮಟ್ಟದ ಡಿಜಿಟಲ್ ನಿಯಮಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

ADVERTISEMENT

ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಹಾಗೂ ಭಾರತೀಯ ಮೊಬೈಲ್ ಕಾಂಗ್ರೆಸ್‌ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. 

‘ಡಿಜಿಟಲ್ ತಂತ್ರಜ್ಞಾನಕ್ಕಾಗಿ ಜಾಗತಿಕ ನಿಯಮಗಳ ಚೌಕಟ್ಟನ್ನು ರಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾಗತಿಕ ಸಂಸ್ಥೆಗಳು ಒಂದುಗೂಡಿ ನಿಯಮಗಳ ಚೌಕಟ್ಟನ್ನು ರಚಿಸುವ ಅಗತ್ಯವಿದೆ’ ಎಂದರು.

‘ವೈಯಕ್ತಿಕ ಮಾಹಿತಿ, ಖಾಸಗಿತನ ರಕ್ಷಣೆಯ ಜತೆಗೆ, ಮಾಧ್ಯಮಗಳಿಗೆ ತಪ್ಪು ಮಾಹಿತಿ ರವಾನೆಯಾಗದಂತೆ ತಡೆಯುವ ಹಲವು ಬಹುಮುಖ್ಯವಾದ ಅಂಶಗಳನ್ನು ಇದು ಒಳಗೊಂಡಿದೆ. ಇದರೊಂದಿಗೆ ವ್ಯಾಪಾರ ಹಾಗೂ ವಹಿವಾಟಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯೂ ಇದರಲ್ಲಿರುವುದರಿಂದ ಅವುಗಳ ರಕ್ಷಣೆಯೂ ಅಗತ್ಯ. ಆದರೆ, ಯಾವುದೇ ಭೌದ್ಧಿಕ ಗಡಿ ಇರದ ಡಿಜಿಟಲ್ ಸಾಧನ ಹಾಗೂ ಅಪ್ಲಿಕೇಷನ್‌ಗಳಲ್ಲಿನ ಕುತಂತ್ರಾಂಶಗಳಿಂದ ತನ್ನ ನಾಗರಿಕರನ್ನು ರಕ್ಷಿಸಲು ಯಾವುದೋ ಒಂದು ರಾಷ್ಟ್ರ ತಡೆಗೋಡೆ ನಿರ್ಮಿಸುವುದು ಅಸಾಧ್ಯ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಇದಕ್ಕೊಂದು ಸ್ಪಷ್ಟ ನೀತಿ ರೂಪಿಸುವುದು ಇಂದಿನ ಜರೂರು’ ಎಂದರು.

‘ಈ ನಿಟ್ಟಿನಲ್ಲಿ ಇಡೀ ಜಗತ್ತು ಒಂದಾಗಿ ಕೆಲಸ ಮಾಡಬೇಕಿದೆ. ಜಾಗತಿಕ ಸಂಸ್ಥೆಗಳು ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ. ಈಗಾಗಲೇ ವಾಯುಯಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸ್ಪಷ್ಟ ನೀತಿಗಳಿವೆ. ಅದೇ ಮಾದರಿಯ ನೀತಿಯನ್ನು ಡಿಜಿಟಲ್ ಜಗತ್ತಿಗೂ ತರಬೇಕಿದೆ. ಅದಕ್ಕಾಗಿ ಎಲ್ಲರನ್ನೂ ಒಳಗೊಳ್ಳುವ, ಸುರಕ್ಷಿತವಾದ ಹಾಗೂ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ನಿಯಮಗಳ ಚೌಕಟ್ಟನ್ನು ರಚಿಸಬೇಕಿದೆ. ಇದರಲ್ಲಿ ನೈತಿಕ ಕೃತಕ ಬುದ್ಧಿಮತ್ತೆ ಹಾಗೂ ಆಯಾ ರಾಷ್ಟ್ರಗಳ ವೈವಿಧ್ಯತೆಯನ್ನೂ ಗೌರವಿಸುವುದು ಅಗತ್ಯ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

‘ಪ್ರಾಚೀನ ರೇಷ್ಮೆ ಮಾರ್ಗವೇ ಆಗಿರಲಿ ಅಥವಾ ಇಂದಿನ ತಂತ್ರಜ್ಞಾನದ ಹಾದಿಯೇ ಇರಲಿ, ಪ್ರಗತಿಯ ಹೊಸ ಸಾಧ್ಯತೆಗಳ ಮೂಲಕ ಜಗತ್ತಿಗೆ ತೆರೆದುಕೊಳ್ಳಲು ಭಾರತ ಸದಾ ಸಿದ್ಧವಿದೆ. ತಂತ್ರಜ್ಞಾನ ಕ್ರಾಂತಿಯು ಮನುಷ್ಯ ಕೇಂದ್ರಿತವಾಗಿರಬೇಕು. ಇಂದು ನಿಗದಿಪಡಿಸುವ ಮಾನದಂಡಗಳು, ಭವಿಷ್ಯದ ಹಾದಿಯನ್ನು ತೋರಿಸುತ್ತದೆ. ಭದ್ರತೆ, ಘನತೆ ಹಾಗೂ ಸಮಾನತೆಯ ತತ್ವಗಳು ನಮ್ಮ ಚರ್ಚೆಯ ಕೇಂದ್ರಿತವಾಗಿರಬೇಕು’ ಎಂದು ಹೇಳಿದರು.

‘ಭಾರತದಲ್ಲಿ 120 ಕೋಟಿ ಮೊಬೈಲ್ ಬಳಕೆದಾರರಿದ್ದಾರೆ. 95 ಕೋಟಿ ಜನರು ಅಂತರ್ಜಾಲ ಸಂಪರ್ಕ ಪಡೆದಿದ್ದಾರೆ. ಡಿಜಿಟಲ್ ವ್ಯವಹಾರವು ಜಾಗತಿಕ ಮಟ್ಟದ ಶೇ 40ರಷ್ಟು ಭಾರತದಲ್ಲೇ ಇದೆ. ಕಟ್ಟಕಡೆಯ ವ್ಯಕ್ತಿಗೆ ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಮುಟ್ಟಿಸಬಹುದು ಎಂಬುದಕ್ಕೆ ಭಾರತ ಒಂದು ಉತ್ತಮ ಉದಾಹರಣೆಯಾಗಿದೆ’ ಎಂದಿದ್ದಾರೆ.

‘ಭಾರತದಲ್ಲಿನ ಡಿಜಿಟಲ್ ವ್ಯವಸ್ಥೆಯಲ್ಲಿ ಮಾಹಿತಿ ಭದ್ರತೆ ಕಾನೂನು ಹಾಗೂ ರಾಷ್ಟ್ರೀಯ ಸೈಬರ್‌ ಭದ್ರತೆಯ ನೀತಿಗಳಿವೆ. ಇದರ ಮೂಲಕ ಮಾಹಿತಿ ಸುರಕ್ಷತೆಗೆ ಭಾರತ ಬದ್ಧವಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.