ನವದೆಹಲಿ: ‘ವೃತ್ತಿಪರ ನಿರಾಶಾವಾದಿಗಳ ಒತ್ತಡದಿಂದ ಈ ಸಮಾಜವನ್ನು ಮುಕ್ತಗೊಳಿಸಬೇಕು’ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಪುರಾತನ ಚಿಂತನೆ ಮತ್ತು ನಂಬಿಕೆಗಳ ಮರುವಿಮರ್ಶೆ ಅಗತ್ಯ’ ಎಂದು ಹೇಳಿದ್ದಾರೆ.
ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಣೆಗೆ ಉಳಿದಿರುವ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಲೇಬೇಕಾಗಿದೆ ಎಂದು ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ನವದೆಹಲಿಗೆ ವಿಮಾನದಲ್ಲಿ ತೆರಳುವಾಗ ಜೂನ್ 1ರಂದು ಬರೆದಿರುವ ಲೇಖನದಲ್ಲಿ ಅವರು ಈ ಮಾತು ಹೇಳಿದ್ದಾರೆ. ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬಳಿಕ ಮೇ 30ರಂದು, ತಪಸ್ಸು ಕೈಗೊಳ್ಳಲು ಅವರು ಕನ್ಯಾಕುಮಾರಿಗೆ ತೆರಳಿದ್ದರು.
21ನೇ ಶತಮಾನದ ಜಗತ್ತು, ಹಲವು ಭರವಸೆಗಳೊಂದಿಗೆ ಭಾರತದತ್ತ ದೃಷ್ಟಿ ನೆಟ್ಟಿದೆ. ಜಾಗತಿಕ ಆಯಾಮ ತಲುಪಲು ನಾವು ಅನೇಕ ಬದಲಾವಣೆ ತರಬೇಕಾಗಿದೆ. ಅದಕ್ಕಾಗಿ ನಮ್ಮ ಸಾಂಪ್ರದಾಯಿಕ ಶೈಲಿಯ ಚಿಂತನೆಯನ್ನು ಬದಲಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮೋದಿ ಅವರ ಈ ಲೇಖನ ಹಲವು ದೈನಿಕಗಳಲ್ಲಿ ಲೋಕಸಭೆ ಚುನಾವಣೆಯ ಮತ ಎಣಿಕೆಯ ಮುನ್ನಾದಿನವಾದ ಸೋಮವಾರ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದ್ದು, ಮೋದಿ 3ನೇ ಅವಧಿಗೆ ಪ್ರಧಾನಿ ಆಗಲಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಈ ಲೇಖನವು ಗಮನಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.