ತ್ರಿಶೂರ್: ‘ಮಹಿಳಾ ಮೀಸಲಾತಿ ಮಸೂದೆ ಜಾರಿಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಬಿಜೆಪಿ ಕೇರಳ ಘಟಕವು ‘ಸ್ತ್ರೀ ಶಕ್ತಿ ಸಂಗಮಮ್’ ಎಂಬ ಬೃಹತ್ ಸಮಾವೇಶವನ್ನು ಜ. 2ರಂದು ಆಯೋಜಿಸಿದೆ. ಇದರಲ್ಲಿ ಸುಮಾರು ಎರಡು ಲಕ್ಷ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಮಸೂದೆಯೊಂದರ ಯಶಸ್ಸಿಗೆ ಸಂಬಂಧಿಸಿದಂತೆ ಆಯೋಜನೆಗೊಳ್ಳುತ್ತಿರುವ ಬೃಹತ್ ಸಮಾವೇಶ ಕೇರಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಅತ್ಯಂತ ದೊಡ್ಡದು ಹಾಗೂ ವಿನೂತನವಾದದ್ದು’ ಎಂದಿದ್ದಾರೆ.
‘ತ್ರಿಶೂರ್ನ ತೆಕ್ಕಿನಾಡು ಮೈದಾನದಲ್ಲಿ ಸಮಾವೇಶ ಜರುಗಲಿದೆ. ಇದರಲ್ಲಿ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಉದ್ಯಮಿಗಳು, ನರೇಗಾ ಕಾರ್ಮಿಕರು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರು ಸೇರಿದಂತೆ ಹಲವು ಕ್ಷೇತ್ರಗಳ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಿಸಿದರು.
‘ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಮುಖ್ಯ ಉದ್ದೇಶವೇ ಮಹಿಳಾ ಮೀಸಲಾತಿಗಾಗಿ ಪ್ರಧಾನಿಗೆ ಕೇರಳದ ಅಭಿನಂದನೆ ಸಲ್ಲಿಸುವುದಾಗಿದೆ’ ಎಂದು ಸುರೇಂದ್ರನ್ ತಿಳಿಸಿದರು.
‘ದಕ್ಷಿಣ ಭಾರತದ ಯಾವ ರಾಜ್ಯವೂ ಇಷ್ಟು ದೊಡ್ಡ ಮಟ್ಟದ ಮಹಿಳಾ ಸಮಾವೇಶವನ್ನು ಆಯೋಜಿಸಿಲ್ಲ. ಕೇರಳಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಕೇವಲ ಈ ಸಮಾವೇಶದಲ್ಲಷ್ಟೇ ಭಾಗಿಯಾಗಲಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.